ಬೆಂಗಳೂರು: ಬಹುತೇಕ ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯರ ಅಧಿಕಾರ ಅವಧಿ ಮುಗಿಯುವ ಹಂತಕ್ಕೆ ಬಂದಿದ್ದು, ಚುನಾವಣೆ ನಡೆಸುವ ಸಾಧ್ಯತೆ ಇಲ್ಲದಿರುವ ಕಾರಣ ವಿಶೇಷ ಸಮಿತಿ ಅಥವಾ ಆಡಳಿತಾಧಿಕಾರಿಗಳನ್ನು ನೇಮಿಸುವ ಬಗ್ಗೆ ರಾಜ್ಯ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.
ಸಾಕಷ್ಟು ಗ್ರಾಮ ಪಂಚಾಯಿತಿಗಳ ಅಧಿಕಾರ ಅವಧಿಯನ್ನು ಚುನಾವಣೆ ನಡೆದ ದಿನಾಂಕದ ಆಧಾರದಲ್ಲಿ ತೆಗೆದುಕೊಂಡರೆ ಮೇ ತಿಂಗಳಿಗೆ ಕೊನೆ ಆಗುತ್ತದೆ. ಆದರೆ, ಅಧಿಕಾರ ಸ್ವೀಕಾರ ಮಾಡಿದ್ದನ್ನು ಗಣನೆಗೆ ತೆಗೆದುಕೊಂಡರೆ ಜೂನ್ ಮತ್ತು ಜುಲೈನಲ್ಲಿ ಕೊನೆಗೊಳ್ಳುತ್ತದೆ.
ಚುನಾಯಿತ ಸದಸ್ಯರ ಅಧಿಕಾರ ಅವಧಿ ಮುಗಿದ ಬಳಿಕ ಅವರು ಕಾರ್ಯ ನಿರ್ವಹಣೆ ಮಾಡಲು ಸಾಧ್ಯವಿಲ್ಲ. ಆಡಳಿತಾಧಿಕಾರಿಗಳನ್ನೂ ನೇಮಿಸಿದರೆ ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಬೇಕಾಗುತ್ತದೆ. ಈ ಪರಿಸ್ಥಿತಿಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಆರು ತಿಂಗಳ ಕಾಲ ಚುನಾವಣೆ ಮುಂದೂಡುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಪಂಚಾಯತ್ ಇಲಾಖೆ ಪತ್ರ ಬರೆದಿತ್ತು. ‘ಕೊರೊನಾ ವೈರಸ್ ಸೋಂಕಿನ ಗಂಭೀರ ಪರಿಸ್ಥಿತಿ ಇರುವುದರಿಂದ ಅದು ಮುಗಿಯುವ ತನಕ ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ ಎಂದು ಮಾರುತ್ತರ ಬರೆದಿದ್ದೇವೆ’ ಎಂದು ರಾಜ್ಯ ಚುನಾವಣಾ ಆಯೋಗ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಆಡಳಿತಾಧಿಕಾರಿ ನೇಮಿಸುವ ಸಂಬಂಧ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಇದೇ ಸಮಯದಲ್ಲಿ ಚುನಾವಣೆ ನಡೆದಿದ್ದು ನಿಜ. ಆದರೆ, ಅಧಿಕಾರ ಸ್ವೀಕಾರ ಮಾಡಿದ್ದು ಜೂನ್ ಮತ್ತು ಜುಲೈನಲ್ಲಿ. ಆ ಪ್ರಕಾರ ಜೂನ್ನಲ್ಲಿ 2,600 ಗ್ರಾಮ ಪಂಚಾಯಿತಿಗಳ ಮತ್ತು ಜುಲೈನಲ್ಲಿ ಇನ್ನಷ್ಟು ಗ್ರಾಮ ಪಂಚಾಯಿತಿಗಳ ಅಧಿಕಾರ ಅವಧಿ ಮುಗಿಯುತ್ತದೆ.ಆದ್ದರಿಂದ ತರಾತುರಿಯಲ್ಲಿ ನಿರ್ಣಯ ತೆಗೆದುಕೊಳ್ಳುವ ಅಗತ್ಯವಿಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
ರಾಜ್ಯದಲ್ಲಿ ಒಟ್ಟು 6,024 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಬೇಕಿತ್ತು. ಕೊರೊನಾ ಸೋಂಕಿನಿಂದಾಗಿ ಸದ್ಯಕ್ಕೆ ಚುನಾವಣೆ ನಡೆಯುವ ಸಾಧ್ಯತೆ ಇಲ್ಲ. ಪಂಚಾಯತ್ ರಾಜ್ ಕಾಯ್ದೆ 1993 ರಡಿ ಚುನಾವಣೆ ಮುಂದೂಡಿಕೆಗೆ ಅವಕಾಶವಿಲ್ಲ. ಆದರೆ, ಕೊರೊನಾ ಸೋಂಕನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ, ಅನಿವಾರ್ಯವಾಗಿ ಚುನಾವಣೆ ಮುಂದೂಡಬೇಕಾದ ಪರಿಸ್ಥಿತಿ ಎದುರಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.