ಸಿದ್ದಾಪುರ(ಕೊಡಗು): ಅನಾರೋಗ್ಯದಿಂದ ಬಳಲುತ್ತಿದ್ದ ಕಾಡಾನೆಯೊಂದು ಇಲ್ಲಿನ ಕಾಫಿ ತೋಟದಲ್ಲಿ ಗುರುವಾರ ಕುಸಿದು ಬಿದ್ದಿದ್ದು, ತೀವ್ರ ಅಸ್ವಸ್ಥಗೊಂಡಿದೆ.
ವನ್ಯಜೀವಿ ವೈದ್ಯಾಧಿಕಾರಿ ಡಾ.ಮುಜೀಬ್, ಬೆಳಿಗ್ಗೆಯೇ ಚಿಕಿತ್ಸೆ ನೀಡಿದ್ದಾರೆ. ಆದರೆ ಔಷಧೋಪಚಾರ ಮಾಡಿದ ಎಂಟು ಗಂಟೆ ಬಳಿಕವೂ ಆನೆಯು ಚೇತರಿಸಿಕೊಂಡಿಲ್ಲ. ಬಿದ್ದ ಜಾಗದಲ್ಲೇ ನೋವಿನಿಂದ ನರಳಾಡುತ್ತಿದೆ. ಮತ್ತಷ್ಟು ಗ್ಲೂಕೋಸ್, ಚುಚ್ಚುಮದ್ದು ನೀಡಿದರೂ ಪರಿಣಾಮವಾಗಿಲ್ಲ. ಅರಣ್ಯ ಇಲಾಖೆಯ ಸಿಬ್ಬಂದಿಯು ಮರದ ಕಂಬಗಳನ್ನು ಬಳಸಿ ಹಾಗೂ ದುಬಾರೆ ಶಿಬಿರದ ಐದು ಸಾಕಾನೆಗಳ ನೆರವಿನಿಂದ ಅಸ್ವಸ್ಥ ಆನೆಯನ್ನು ಎಬ್ಬಿಸಿ ನಿಲ್ಲಿಸಲು ಪ್ರಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ.
‘ಚಳಿಗಾಲದಲ್ಲಿ ಶರೀರದಲ್ಲಿ ನೀರಿನ ಅಂಶ ಕಡಿಮೆಯಾಗುವುದರಿಂದ ಹೆಣ್ಣು ಕಾಡಾನೆಗಳು ನಿತ್ರಾಣಗೊಳ್ಳುತ್ತವೆ. ಅಂದಾಜು 40 ವರ್ಷ ಪ್ರಾಯದ ಹೆಣ್ಣಾನೆ ಇದಾಗಿದ್ದು, ಯಾವುದೇ ಗಾಯದ ಗುರುತು ಪತ್ತೆಯಾಗಿಲ್ಲ. ಚಿಕಿತ್ಸೆಮುಂದುವರಿಸಲಾಗುವುದು’ ಎಂದು ಡಾ.ಮುಜೀಬ್ ತಿಳಿಸಿದರು.
ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎನ್.ಟಿ ಪೊನ್ನಪ್ಪ ಎಂಬುವವರ ಕಾಫಿ ತೋಟದಲ್ಲಿ ಬಿದ್ದಿದ್ದ ಈ ಕಾಡಾನೆ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಬೆಳಿಗ್ಗೆ ಮಾಹಿತಿ ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.