ADVERTISEMENT

ಕಾಡಾನೆ ದಾಳಿ ಪರಿಹಾರ ₹ 15 ಲಕ್ಷಕ್ಕೆ ಹೆಚ್ಚಳ: ಸಿಎಂ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 10:06 IST
Last Updated 27 ನವೆಂಬರ್ 2022, 10:06 IST
   

ಚಿಕ್ಕಮಗಳೂರು: ಕಾಡಾನೆ ದಾಳಿಯಿಂದ ಸಾವಿಗೀಡಾದವರ ಕುಟುಂಬಕ್ಕೆ ನೀಡುವ ಪರಿಹಾರವನ್ನು₹ 7.5 ಲಕ್ಷದಿಂದ ₹ 15 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕೊಪ್ಪದಲ್ಲಿ ಬಿಜೆಪಿ ಜನ ಸಂಕಲ್ಪ ಸಮಾವೇಶದಲ್ಲಿ ಅವರು ಮಾತನಾಡಿದರು. ಆನೆ ಉಪಟಳ ನಿಯಂತ್ರಣ ಕಾರ್ಯಕ್ಕೆ ಪ್ರತಿ ಜಿಲ್ಲೆಯಲ್ಲಿ ಪ್ರತ್ಯೇಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ 50 ಮಂದಿಯ ದಳ ನೇಮಿಸಲು ಕ್ರಮವಹಿಸಲಾಗಿದೆ ಎಂದು ಹೇಳಿದರು.

ರೈತರ ಮಕ್ಕಳಿಗೆ ಜಾರಿಗೊಳಿಸಿರುವ ವಿದ್ಯಾನಿಧಿ ಯೋಜನೆ ಸವಲತ್ತನ್ನು ಟೈಲರ್ ಗಳ ಮಕ್ಕಳಿಗೂ ವಿಸ್ತರಿಸಲಾಗುವುದು ಎಂದು ಭರವಸೆ ನೀಡಿದರು.

ADVERTISEMENT


ಕಾಫಿ ಬೆಳೆಗಾರರು ತೋಟಗಳಲ್ಲಿ ಒತ್ತುವರಿ ಮಾಡಿರುವ ಜಾಗದ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಲು ಕಂದಾಯ ಸಚಿವ ದಾರಿ ಹುಡುಕಿದ್ದಾರೆ. ಯೋಜನೆ ರೂಪಿಸಿ ಬೆಳೆಗಾರರಿಗೆ ಅನುಕೂಲ ಮಾಡಿಕೊಡುತ್ತೇವೆ ಎಂದು ಆಶ್ವಾಸನೆ ನೀಡಿದರು.

ಅಡಿಕೆಗೆ ತಗುಲಿರುವ ಎಲೆಚುಕ್ಕಿ ರೋಗ ಹರಡದಂತೆ ಔಷಧ ಸಿಂಪಡಣೆಗೆ ₹ 10 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ರೋಗದ ನಿವಾರಣೆ ನಿಟ್ಟಿನಲ್ಲಿ ಔಷಧ ಶೋಧಕ್ಕೆ ವಿಜ್ಞಾನಿಗಳ ತಂಡ ಕಾರ್ಯಗತವಾಗಿದೆ ಎಂದು ಹೇಳಿದರು.

ದತ್ತಪೀಠದಲ್ಲಿ ಮೂಲ ಪೂಜೆ ನಿಟ್ಟಿನಲ್ಲಿ ಸಿ.ಟಿ.ರವಿ ನೇತೃತ್ವದಲ್ಲಿ ಸುದೀರ್ಘ ಹೋರಾಟ ನಡೆದಿದೆ. ಹೋರಾಟದ ಪ್ರತಿಫಲವಾಗಿ ಒಳ್ಳೆಯ ದಿವಸಗಳು ಬಂದಿದೆ, ಕಾನೂನಾತ್ಮಕವಾಗಿಯೂ ಒಂದು ಹಂತಕ್ಕೆ ಬಂದಿದೆ.ಮುಂದಿನ ದಿನಗಳಲ್ಲಿ ಪರಿಹಾರ ಸಿಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಮುಳ್ಳಯ್ಯನಗಿರಿಯಿಂದ ದತ್ತಪೀಠ ಭಾಗಕ್ಕೆ 'ರೋಪ್ ವೇ' ನಿರ್ಮಾಣ ಬಜೆಟ್ ನಲ್ಲಿ ಘೋಷಿಸಲಾಗಿದೆ. ಈ ಕಾಮಗಾರಿ ಶೀಘ್ರದಲ್ಲಿ ಆರಂಭವಾಲಿದೆ ಎಂದರು.


ಶೃಂಗೇರಿಯಲ್ಲಿ 100ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೆ ಇನ್ನು ಎರಡು ತಿಂಗಳೊಳಗೆ ನಾನೇ ಬಂದು ಶಂಕುಸ್ಥಾಪನೆ ನೆರವೇರಿಸುತ್ತೇನೆ ಎಂದು ಭರವಸೆ ನೀಡಿದರು.

ದತ್ತ ಪೀಠಕ್ಕೆ 3 ದಿನಗಳಲ್ಲಿ ಅರ್ಚಕರ ನೇಮಕ: ಸಿ.ಟಿ. ರವಿ
ಈ ಬಾರಿ ದತ್ತ ಜಯಂತ್ಯುತ್ಸವದಲ್ಲಿ ಹಿಂದು ಅರ್ಚಕರು ಪೂಜೆ ನೆರವೇರಿಸಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿಶ್ವಾಸ ವ್ಯಕ್ತಪಡಿಸಿದರು.

ಕೊಪ್ಪದಲ್ಲಿ ಬಿಜೆಪಿ ಜನ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದರು. ಹಿಂದೂ ಅರ್ಚಕರ ನೇಮಕಕ್ಕೆ ಇರುವ ಅಡ್ಡಿಆತಂಕಳನ್ನು ಮೂರು ದಿನಗಳಲ್ಲಿ ನಿವಾರಿಸಲಾಗುವುದು. ದತ್ತ ಪೀಠದಲ್ಲಿ ವಿಜೃಂಭಣೆಯಿಂದ ಪೂಜೆ ನೆರವೇರಿಸಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.