ADVERTISEMENT

ಗ್ರೂಪ್ ಬಿ, ಸಿ ಸಮೂಹದ ಶೇ 6 ರಷ್ಟು ನೌಕರರ ವರ್ಗಾವಣೆ ಅಧಿಕಾರ ಸಚಿವರಿಗೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 21:22 IST
Last Updated 26 ಜೂನ್ 2020, 21:22 IST

ಬೆಂಗಳೂರು: ಕೋವಿಡ್‌ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರ ವರ್ಗಾವಣೆ ಮಾಡುವುದಿಲ್ಲ ಎಂದು ಹೇಳಿದ್ದ ರಾಜ್ಯ ಸರ್ಕಾರ ಇದೀಗ ವರ್ಗಾವಣೆ ಅಧಿಕಾರವನ್ನು ಸಚಿವರಿಗೆ ನೀಡಿ ಪರಿಷ್ಕೃತ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರದ ಗ್ರೂಪ್‌ ‘ಬಿ’ ಮತ್ತು ಗ್ರೂಪ್‌ ‘ಸಿ’ ಸಮೂಹದ ಅಧಿಕಾರಿಗಳು ಮತ್ತು ಸಿಬ್ಬಂದಿಯ (ಜ್ಯೇಷ್ಠತಾ ಘಟಕದಲ್ಲಿ) ಒಟ್ಟು ವೃಂದ ಬಲದ ಶೇ 6ರಷ್ಟು ಸಿಬ್ಬಂದಿ ವರ್ಗಾವಣೆ ಮಾಡಲು ಅನುಮತಿ ನೀಡಲಾಗಿದೆ. ಆದರೆ, ಈ ವರ್ಗಾವಣೆಯ ಅಧಿಕಾರವನ್ನು ಆಯಾ ಇಲಾಖೆಗಳ ಸಚಿವರಿಗೇ ನೀಡಿರುವುದು ನೌಕರರ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

‘ಈ ವರ್ಷ ಸಾರ್ವತ್ರಿಕ ವರ್ಗಾವಣೆ ಮಾಡುವುದಿಲ್ಲ. ವಿರಳ ಪ್ರಕರಣಗಳಲ್ಲಿ ಮಾತ್ರ ಮುಖ್ಯಮಂತ್ರಿಯವರ ಅನುಮತಿ ಪಡೆದು ವರ್ಗಾವಣೆ ಮಾಡಲು ಅವಕಾಶ ನೀಡಲಾಗಿದೆ’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿತ್ತು.

ADVERTISEMENT

ಶುಕ್ರವಾರ ಹೊರಡಿಸಿರುವ ಹೊಸ ಆದೇಶದಿಂದ ಅಧಿಕಾರಿಗಳು ಶಾಸಕರು, ಸಚಿವರ ಮೂಲಕ ನೌಕರರನ್ನು ತಮಗೆ ಬೇಕಾದ ಕಡೆಗೆ ವರ್ಗಾವಣೆ ಮಾಡಿಸಿಕೊಳ್ಳಬಹುದು. ಇದರಲ್ಲಿ ಯಾವುದೇ ಪಾರದರ್ಶಕತೆ ಇರುವುದಿಲ್ಲ, ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡಬಹುದು ಎಂಬ ಚರ್ಚೆಯೂ ಶುರುವಾಗಿದೆ.

ವರ್ಗಾವಣೆಗೆ ಸರ್ಕಾರ ನಿರ್ಬಂಧ ವಿಧಿಸಿದ ಬಳಿಕ ವರ್ಗಾವಣೆಗೆ ಅವಕಾಶ ಕೊಡಬೇಕು ಎಂದು ನೌಕರರ ಸಮುದಾಯ ಕೂಡ ಸಚಿವರ ಮೇಲೆ ಒತ್ತಡ ಹಾಕಿತ್ತು. ವ್ಯಾಪಕವಾಗಿ ವರ್ಗಾವಣೆ ಮಾಡುವುದರ ಬದಲಿಗೆ ಸೀಮಿತವಾಗಿ ಅವಕಾಶ ಕಲ್ಪಿಸಲು ಪರಿಷ್ಕೃತ ಆದೇಶ ಹೊರಡಿಸಲಾಗಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.