ADVERTISEMENT

ಎಂಜಿನಿಯರಿಂಗ್‌ನಲ್ಲೂ ‘ಸೀಟ್‌ ಬ್ಲಾಕಿಂಗ್‌’ ದಂಧೆ

ಪ್ರತಿಷ್ಠಿತ ಕಾಲೇಜುಗಳಲ್ಲೂ ಶೇ 60ರಷ್ಟು ಉಳಿಕೆ: ಸಚಿವ ಸುಧಾಕರ್ ಶಂಕೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2023, 15:19 IST
Last Updated 13 ಅಕ್ಟೋಬರ್ 2023, 15:19 IST
   

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಂಚಿಕೆ ಮಾಡಿದ್ದ ಸೀಟುಗಳು ಕೆಲ ಪ್ರತಿಷ್ಠಿತ ಕಾಲೇಜುಗಳಲ್ಲೂ ಖಾಲಿ ಉಳಿದಿದ್ದು, ‘ಸೀಟ್‌ ಬ್ಲಾಕಿಂಗ್‌’ ದಂಧೆ ನಡೆದಿರುವ ಅನುಮಾನಕ್ಕೆ ಕಾರಣವಾಗಿದೆ.

ಕೆಇಎಗೆ ಶುಕ್ರವಾರ ಭೇಟಿ ನೀಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ‘ಆರ್‌.ವಿ. ಕಾಲೇಜು, ಎಂ.ಎಸ್‌.ರಾಮಯ್ಯ, ಸಾಗರ್‌ ಎಂಜಿನಿಯರಿಂಗ್‌ ಕಾಲೇಜು, ಪಿಇಎಸ್ ವಿಶ್ವವಿದ್ಯಾಲಯ ಸೇರಿದಂತೆ ಉನ್ನತ ಕಾಲೇಜುಗಳಲ್ಲಿ ಕಂಪ್ಯೂಟರ್ ಸೈನ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ, ಬಯೊ ಟೆಕ್ನಾಲಜಿ, ಎಲೆಕ್ಟ್ರಿಕಲ್‌ ಮತ್ತು ಸಿವಿಲ್ ಎಂಜಿನಿಯರಿಂಗ್‌ ವಿಭಾಗದ ಸೀಟುಗಳು ಖಾಲಿ ಉಳಿದಿವೆ. ಬೇಡಿಕೆ ಇರುವ ಕಾಲೇಜಿನಲ್ಲಿ ಶೇ 60ರಷ್ಟು ಸೀಟು ಖಾಲಿ ಉಳಿದಿರುವುದು ಸಂಶಯ ಮೂಡಿಸಿದೆ’ ಎಂದರು.

‘ಇಂತಹ ಪ್ರಕರಣದಲ್ಲಿ ಎಲ್ಲ ವಿದ್ಯಾರ್ಥಿಗಳನ್ನೂ ದೂರಲು ಸಾಧ್ಯವಿಲ್ಲ. ಸೀಟು ಹಿಂದಿರುಗಿಸಿದವರು ನೀಡಿದ ಕಾರಣಗಳನ್ನು ನಕಲಿ ಎನ್ನಲು ಸಾಧ್ಯವಿಲ್ಲ. ಆದರೆ, ಯಾರಾದರೂ ಒಬ್ಬರು ಇಂತಹ ದಂಧೆಯನ್ನು ನಿಯಂತ್ರಿಸುತ್ತಿರಬಹುದು ಎಂಬ ಶಂಕೆ ಮೂಡಿದೆ. ಇದಕ್ಕೆ ಕಡಿವಾಣ ಹಾಕಲು ಉಳಿದ ಸೀಟುಗಳ ಭರ್ತಿಗೆ ಕೌನ್ಸೆಲಿಂಗ್ ಮುಂದುವರಿಸುವ ಕುರಿತು ಚರ್ಚಿಸಲಾಗುವುದು’ ಎಂದು ಹೇಳಿದರು.  

ADVERTISEMENT

ಆ್ಯಪ್‌ ಆಧಾರಿತ ಅರ್ಜಿ ಸಲ್ಲಿಕೆ: 

‘ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆಯಲ್ಲಿ ಸಾಕಷ್ಟು ಲೋಪಗಳು ಪತ್ತೆಯಾಗಿವೆ. ವಿದ್ಯಾರ್ಥಿಗಳು ತಪ್ಪು ಮಾಹಿತಿ ತುಂಬಿರುವುದು, ದಾಖಲೆಗಳನ್ನು ಸರಿಯಾಗಿ ನೀಡದೇ ಇರುವುದು ಪ್ರಮುಖ ಸಮಸ್ಯೆ. ಇಂತಹ ಸಮಸ್ಯೆಗಳನ್ನು ನಿವಾರಿಸಲು ಮುಂದಿನ ಶೈಕ್ಷಣಿಕ ವರ್ಷದಿಂದ ಸಿಇಟಿಗೆ ಮೊಬೈಲ್‌ ಆ್ಯಪ್‌ ಆಧಾರಿತ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.