ADVERTISEMENT

ಶಾಲಾ ಮಕ್ಕಳಿಗೆ ಕಳಪೆ ಸಮವಸ್ತ್ರ: ತನಿಖೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2023, 16:15 IST
Last Updated 7 ಸೆಪ್ಟೆಂಬರ್ 2023, 16:15 IST
ಎಚ್‌.ಕೆ.ಪಾಟೀಲ
ಎಚ್‌.ಕೆ.ಪಾಟೀಲ   

ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳ ಸಮವಸ್ತ್ರಕ್ಕೆ ಕಳಪೆ ಬಟ್ಟೆ ಪೂರೈಕೆ ಮತ್ತು ಅದಕ್ಕೆ ₹117 ಕೋಟಿ  ಹಣ ಪಾವತಿಸಿರುವ ಪ್ರಕರಣದ ಬಗ್ಗೆ ಇಲಾಖಾ ತನಿಖೆ ನಡೆಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಕಾನೂನು ಮತ್ತು ಸಂಸದೀಯ ಸಚಿವ ಎಚ್‌.ಕೆ.ಪಾಟೀಲ ಅವರು ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿ, ಇದೊಂದು ಗಂಭೀರ ಅವ್ಯವಹಾರವಾಗಿದ್ದು, ತನಿಖೆ ಅಗತ್ಯ ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು ಎಂದರು. 

2022–23 ಮತ್ತು 2023–24ನೇ ಸಾಲಿಗೆ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಶಿಕ್ಷಣ ಇಲಾಖೆಯಿಂದ ಮಕ್ಕಳಿಗೆ ಸಮವಸ್ತ್ರ ಸಿದ್ಧಪಡಿಸಲು ಬಟ್ಟೆಯನ್ನು ಪೂರೈಕೆ ಮಾಡಿತ್ತು. ಆದರೆ, ಪೂರೈಕೆ ಮಾಡಿದ ಬಟ್ಟೆ ಶೇ 90 ರಷ್ಟು ಕಳಪೆ ಗುಣಮಟ್ಟದ್ದಾಗಿತ್ತು. ಆದರೆ, ಈ ಬಟ್ಟೆ ಪೂರೈಕೆಗೆ ಪೂರ್ಣ ಪ್ರಮಾಣದಲ್ಲಿ ಹಣ ಪಾವತಿಸಲಾಗಿತ್ತು. ಕಳಪೆ ಬಟ್ಟೆ ಪೂರೈಕೆಗೆ ಯಾರು ಕಾರಣರು ಎಂಬುದನ್ನು ಪತ್ತೆ ಮಾಡಿ ಅಂತಹವರ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಎಂದು ಪಾಟೀಲ ತಿಳಿಸಿದರು.

ADVERTISEMENT

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆಎಚ್‌ಡಿಸಿ ವ್ಯವಸ್ಥಾ‍ಪಕ ನಿರ್ದೇಶಕರನ್ನು ಅಮಾನತುಗೊಳಿಸಲಾಗಿದೆ ಎಂದರು.

2022–23ನೇ ಸಾಲಿಗೆ ಉತ್ತಮ ಗುಣಮಟ್ಟದ ಬಟ್ಟೆ ಪೂರೈಕೆ ಮಾಡಿದ ಸಮವಸ್ತ್ರಗಳ ಬಟ್ಟೆಗೆ ಮಾತ್ರ ಕೆಎಚ್‌ಡಿಸಿ ಸಂಸ್ಥೆಗೆ ಪಾವತಿಸಬೇಕಾಗಿರುವ  ಬಾಕಿ ಮೊತ್ತ ₹14.48 ಕೋಟಿ ಬಿಡುಗಡೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. 2023–24ನೇ ಸಾಲಿಗೆ ಎರಡನೇ ಜೊತೆ ಕಳಪೆ ಗುಣಮಟ್ಟದ ಬಟ್ಟೆ ಪೂರೈಸಿದ್ದಕ್ಕಾಗಿ ವಿಳಂಬ ದಂಡ ಮತ್ತು ಶಿಕ್ಷಣ ಇಲಾಖೆ ತಡೆ ಹಿಡಿದಿದ್ದ ₹2.43 ಕೋಟಿಯನ್ನು ನೇಕಾರರ ಹಿತದೃಷ್ಟಿಯಿಂದ ಬಿಡುಗಡೆ ಮಾಡಲು ತೀರ್ಮಾನಿಸಲಾಯಿತು ಎಂದು ಹೇಳಿದರು.

2022–23ನೇ ಸಾಲಿನಲ್ಲಿ (2ನೇ ಜೊತೆ) ₹96.92 ಕೋಟಿ ವೆಚ್ಚದಲ್ಲಿ 134.05 ಲಕ್ಷ ಮೀಟರ್‌ ಬಟ್ಟೆಯನ್ನು ಎನ್‌ಸಿಸಿಎಫ್‌ ಮತ್ತು ಕೇಂದ್ರೀಯ ಭಂಡಾರದಿಂದ ಮೂಲಕ ಖರೀದಿಸಲಾಗಿತ್ತು. ಇದಕ್ಕೆ ₹86.89 ಕೋಟಿ ಪಾವತಿಸಲಾಗಿತ್ತು. ಇದರಲ್ಲಿ ವಿಳಂಬ ಸರಬರಾಜು ದಂಡದ ಮೊತ್ತ ₹3.81 ಕೋಟಿ ಸೇರಿತ್ತು. ಇದರಲ್ಲಿ ₹48.72 ಕೋಟಿ ಮೌಲ್ಯದ 69.78 ಲಕ್ಷ ಮೀಟರ್‌ ಬಟ್ಟೆ ಕಳಪೆಯಾಗಿತ್ತು. ₹10 ಕೋಟಿ ತಡೆ ಹಿಡಿಯಲಾಗಿದೆ ಎಂದರು.

ಅಲ್ಲದೇ, ಇದೇ ವರ್ಷ 1ನೇ ಜೊತೆ ಬಟ್ಟೆ ಖರೀದಿಗೆ ನೋಂದಾಯಿತ ನೇಕಾರರಿಂದ ₹22.40 ಕೋಟಿ ಮೌಲ್ಯದ ಬಟ್ಟೆ ಖರೀದಿಸಲಾಗಿತ್ತು. ಇದರಲ್ಲಿ ₹20.04 ಕೋಟಿ ಪಾವತಿ ಮಾಡಲಾಗಿತ್ತು. ₹2.35 ಕೋಟಿ ತಡೆ ಹಿಡಿಯಲಾಗಿತ್ತು ಎಂದರು.

2023–24 ರ ಸಾಲಿನಲ್ಲಿ 1ನೇ ಜೊತೆ ಬಟ್ಟೆಯನ್ನು ₹16.92 ಕೋಟಿ ವೆಚ್ಚದಲ್ಲಿ ನೇಕಾರರಿಂದ ಖರೀದಿಸಲಾಗಿತ್ತು. ಇದಕ್ಕೆ ₹4.80 ಕೋಟಿ ಪಾವತಿ ಮಾಡಲಾಗಿತ್ತು. ₹12.12 ಕೋಟಿ ತಡೆ ಹಿಡಿಯಲಾಗಿದೆ. ಇದೇ ಅವಧಿಯಲ್ಲಿ ಕೆಎಸ್‌ಟಿಐಡಿಸಿ ಮೂಲಕ ₹8 ಕೋಟಿ ವೆಚ್ಚದಲ್ಲಿ 10.47 ಲಕ್ಷ ಮೀಟರ್‌ ಬಟ್ಟೆ ಖರೀದಿಸಲಾಗಿತ್ತು. ₹5.63 ಕೋಟಿ ಪಾವತಿ ಮಾಡಲಾಗಿದೆ. ₹6.08 ಕೋಟಿ ಮೌಲ್ಯದ ಸುಮಾರು 8.66 ಲಕ್ಷ ಮೀಟರ್‌ ಬಟ್ಟೆ  ಕಳಪೆಯಾಗಿತ್ತು. ₹2.43 ಕೋಟಿ ತಡೆ ಹಿಡಿಯಲಾಗಿದೆ ಎಂದು ಪಾಟೀಲ ತಿಳಿಸಿದರು.

5 ನೇ ಹಣಕಾಸು ಆಯೋಗ ರಚನೆ
ಐದನೇ ಹಣಕಾಸು ಆಯೋಗ ರಚಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಇದಕ್ಕೆ ಅಧ್ಯಕ್ಷ ಮತ್ತು ಇಬ್ಬರು ಸದಸ್ಯರನ್ನು ನೇಮಿಸಲು ಮುಖ್ಯಮಂತ್ರಿಯವರಿಗೆ ಅಧಿಕಾರವನ್ನು ನೀಡಲಾಯಿತು ಎಂದು ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು. ಅಲ್ಲದೇ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಇಬ್ಬರು ಅಧಿಕಾರಿ ವರ್ಗದ ಸದಸ್ಯರ ನೇಮಕಾತಿ ಮಾಡುವ ಅಧಿಕಾರವನ್ನು ಮುಖ್ಯಮಂತ್ರಿಯವರಿಗೆ ನೀಡಲಾಗಿದೆ. ಈ ನೇಮಕವನ್ನು ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ ನಿರ್ದೇಶನದ ಅನ್ವಯ ತೀರ್ಮಾನಿಸಲಾಗಿದೆ.
ಶಕ್ತಿ ಸ್ಮಾರ್ಟ್‌ ಕಾರ್ಡ್‌ಗೆ ಸೇವಾ ಶುಲ್ಕ
ಶಕ್ತಿ ಯೋಜನೆಯ ಸ್ಮಾರ್ಟ್‌ ಕಾರ್ಡ್‌ ವಿತರಿಸಲು ಇದ್ದ 3 ತಿಂಗಳ ಕಾಲಮಿತಿಯನ್ನು ಇನ್ನೂ 6 ತಿಂಗಳವರೆಗೆ ವಿಸ್ತರಿಸಲಾಗಿದೆ. ಅಲ್ಲದೇ ಕಾರ್ಡ್‌ ಒದಗಿಸಲು ₹14.16 ಸೇವಾ ಶುಲ್ಕ ನಿಗದಿಪಡಿಸಲು ತೀರ್ಮಾನಿಸಲಾಗಿದೆ ಎಂದು ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು. ಸ್ಮಾರ್ಟ್‌ ಕಾರ್ಡ್‌ಗಳನ್ನು ಗ್ರಾಮ ಒನ್‌ ಬೆಂಗಳೂರು ಒನ್‌ ಕರ್ನಾಟಕ ಒನ್‌ ಸೇವಾ ಕೇಂದ್ರಗಳ ಮೂಲಕ ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಲು ಪ್ರತಿ ಅರ್ಜಿ ₹10 ಪ್ರತಿ ಮಂಜೂರಾತಿ ಮುದ್ರಿಸಲು ₹2 ರಂತೆ ಒಟ್ಟು ₹12 ಆಗಲಿದ್ದು ಇದಕ್ಕೆ ಜಿಎಸ್‌ಟಿ ಸೇರಿ ಒಟ್ಟು ₹14.16 ಸೇವಾ ಶುಲ್ಕ ವಿಧಿಸಲಾಗುವುದು. ಈ ಮೊತ್ತವನ್ನು ಫಲಾನುಭವಿಗಳೇ ಭರಿಸಬೇಕು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.