ADVERTISEMENT

ಸಚಿವ ಈಶ್ವರಪ್ಪ ಹೆಸರಲ್ಲಿ ಉದ್ಯಮಿಗಳಿಗೆ ₹ 36 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2021, 21:27 IST
Last Updated 5 ಅಕ್ಟೋಬರ್ 2021, 21:27 IST
ಸಚಿವ ಕೆ.ಎಸ್. ಈಶ್ವರಪ್ಪ
ಸಚಿವ ಕೆ.ಎಸ್. ಈಶ್ವರಪ್ಪ   

ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಆಪ್ತ ಕಾರ್ಯದರ್ಶಿಗಳು ಎಂದು ಹೇಳಿಕೊಂಡು ಇಬ್ಬರು ಉದ್ಯಮಿಗಳಿಗೆ ಒಟ್ಟು ₹ 36 ಲಕ್ಷ ವಂಚಿಸಿರುವ ಆರೋಪದ ಮೇಲೆ ಐವರ ವಿರುದ್ಧ ಇಲ್ಲಿನ ಸಿಇಎನ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಮಂಗಳೂರಿನ ಮೊಹಮದ್‌ ರೆಹಮಾನ್, ಶಿವಮೊಗ್ಗದ ವಿಠಲ್‌ ರಾವ್, ಮಂಜುನಾಥ್‌, ಖಾಜಿವಲೀಸ್, ಹಾಸನ ಜಿಲ್ಲೆ ಅರಸಿಕೆರೆಯ ಮೊಹಮದ್ ಮುಫಾಸಿರ್ ವಂಚಿಸಿರುವ ಆರೋಪಿಗಳು.

ಇನ್‌ಸ್ಪೆಕ್ಟರ್ ಕೆ.ಟಿ. ಗುರುರಾಜ್ ಕರ್ಕಿ ಮತ್ತು ತಂಡವು ವಿಠಲ್‌ ರಾವ್, ಖಾಜಿವಲೀಸ್ ಅವರನ್ನು ಬಂಧಿಸಿದೆ. ಮೂವರು ತಲೆ ಮರೆಸಿಕೊಂಡಿದ್ದಾರೆ.

‘ವಿಲ್ಲಾ ಪ್ರಾಜೆಕ್ಟ್‌ಗಾಗಿ ಸಚಿವರ ಮೂಲಕ ₹100 ಕೋಟಿ ಸರ್ಕಾರದ ನೆರವು ಕೊಡಿಸುವುದಾಗಿ ನಂಬಿಸಿ 2020ರ ಫೆಬ್ರುವರಿಯಲ್ಲಿ ₹10 ಲಕ್ಷ ಮುಂಗಡ ಪಡೆದಿದ್ದರು. ನಂತರ ಕೈಗೆ ಸಿಗದೆ ಅಲೆದಾಡಿಸುತ್ತಿದ್ದರು. ವಂಚನೆಗೆ ಒಳಗಾಗಿರುವುದು ಖಚಿತವಾದ ನಂತರ ಹಣ ಹಿಂದಿರುಗಿಸಲು ಕೇಳಿದರೆ ಜೀವ ಬೆದರಿಕೆ ಹಾಕಿದ್ದರು’ ಎಂದು ಮೈಸೂರಿನ ಹೆಬ್ಬಾಳದ ಎಂಜಿನಿಯರ್ ಸಿ.ರಾಜೇಶ್‌ ಪ್ರಕರಣ ದಾಖಲಿಸಿದ್ದಾರೆ. ‘ಬೆಂಗಳೂರು ನಗರದಲ್ಲಿ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಲು ಕೆ.ಎಸ್‌. ಈಶ್ವರಪ್ಪ ಅವರ ಮೂಲಕ ಟೆಂಡರ್‌ ಕೊಡಿಸುವುದಾಗಿ ನಂಬಿಸಿ ಜುಲೈ 2019ರಲ್ಲಿ ₹ 26.25 ಲಕ್ಷ ಪಡೆದು ವಂಚಿಸಿದ್ದಾರೆ’ ಎಂದು ಸಾಗರ ತಾಲ್ಲೂಕಿನ ಬರೂರು–ಮುತ್ತಲ್‌ಬೈಲಿನ ಗುತ್ತಿಗೆದಾರ ಬಿ.ಲಕ್ಷ್ಮಣ್‌ ಮತ್ತೊಂದು ದೂರು ದಾಖಲಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.