ಚಿತ್ರದುರ್ಗ: ಲಫಂಗರ ಬಾಯಲ್ಲಿ ಮಾತ್ರ ಲಫಂಗ ಪದಗಳು ಬರುತ್ತವೆ. ಸಂಸ್ಕೃತಿ ಇರುವ ಸಿದ್ದರಾಮಯ್ಯ ಅವರ ಬಾಯಲ್ಲೂ ಈ ಮಾತು ಬಂದಿದೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದರು.
‘ಬಿಜೆಪಿ ಅವರದ್ದು ಲಫಂಗ ರಾಜಕೀಯ’ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಶನಿವಾರ ಇಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
‘ನೀವು ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ಸರಿಯಾದ ಪದಗಳನ್ನು ಬಳಸಿ. ನಾಲಿಗೆ ಬಿಗಿ ಹಿಡಿದು ಮಾತನಾಡಿ. ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ ಮೇಲೂ ನಿಮಗೆ ಬುದ್ದಿ ಬಂದಿಲ್ಲ’ ಎಂದು ಟೀಕಿಸಿದರು.
‘ಬಿಜೆಪಿಯ 104 ಶಾಸಕರು ಒಟ್ಟಾಗಿದ್ದೇವೆ. ನಮ್ಮ ಒಗಟ್ಟನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ. ತಾಕತ್ತಿದ್ದರೆ ನಿಮ್ಮ ಶಾಸಕರನ್ನು ಹಿಡಿಟ್ಟುಕೊಳ್ಳಿ. ಈಗಾಗಲೇ ಐವರು ಶಾಸಕರು ಕಾಂಗ್ರೆಸ್ನಿಂದ ಹೊರಬರಲು ಸಿದ್ಧರಾಗಿದ್ದಾರೆ. ಇನ್ನಷ್ಟು ಜನ ಕಾಂಗ್ರೆಸ್ ತೊರೆಯಲು ಸಜ್ಜಾಗಿದ್ದಾರೆ. ಈ ಸಮ್ಮಿಶ್ರ ಸರ್ಕಾರ ಯಾವಾಗ ಬೀಳುತ್ತದೊ ಗೊತ್ತಿಲ್ಲ’ ಎಂದು ಹೇಳಿದರು.
‘ನಮಗೆ ಕಾಂಗ್ರೆಸ್–ಜೆಡಿಎಸ್ ಶಾಸಕರ ಬೆಂಬಲದ ಅಗತ್ಯವಿಲ್ಲ. ಮೈತ್ರಿ ಪಕ್ಷಗಳ ಶಾಸಕರೇ ಒಬ್ಬೊಬ್ಬರಾಗಿ ರಾಜೀನಾಮೆ ನೀಡಲಿದ್ದಾರೆ. ಇದರಿಂದ ಸರ್ಕಾರ ಅಲ್ಪಮತಕ್ಕೆ ಕುಸಿಯಲಿದೆ. ಸ್ವಶಕ್ತಿಯಿಂದಲೇ ಬಿಜೆಪಿ ಅಧಿಕಾರಕ್ಕೆ ಬರಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
‘ರಾಷ್ಟ್ರೀಯ ಕಾರ್ಯಕಾರಿಣಿ ಮುಕ್ತಾಯವಾದ ಬಳಿಕ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಚರ್ಚಿಸಲು ದೆಹಲಿಯಲ್ಲಿ ಉಳಿದಿದ್ದೆವು. ಅಳಂದ ಶಾಸಕ ಸುಭಾಷ್ ಗುತ್ತೇದಾರ್ ಅವರನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಸಂಪರ್ಕಿಸಿ ಮನವೊಲಿಸುವ ಪ್ರಯತ್ನಿಸಿದರು. ಮಕ್ಕಳ ಕಳ್ಳರಿಂದ ರಕ್ಷಿಸಿಕೊಳ್ಳಲು ರೆಸಾರ್ಟ್ಗೆ ಹೋಗಿದ್ದೆವು’ ಎಂದು ಸರ್ಮಥನೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.