
ಬೆಂಗಳೂರು: ಮುಷ್ಕರ ನಡೆಸುವ ಸಾರಿಗೆ ನಿಗಮಗಳ ಸಿಬ್ಬಂದಿ ವಿರುದ್ಧ ‘ಎಸ್ಮಾ’ ಜಾರಿಗೊಳಿಸುವ ‘ಅಗತ್ಯ ಸೇವೆಗಳ ನಿರ್ವಹಣಾ ತಿದ್ದುಪಡಿ ಮಸೂದೆ’ಗೆ ವಿಧಾನಸಭೆ ಅಂಗೀಕಾರ ನೀಡಿತು.
2015ರಲ್ಲಿ ಜಾರಿಗೆ ತಂದಿದ್ದ ಕಾಯ್ದೆಯ ಅವಧಿ 10 ವರ್ಷಗಳಿದ್ದು, 2025ರ ಮೇ ನಲ್ಲಿ ಅವಧಿ ಮುಕ್ತಾಯವಾದ ಕಾರಣ ಮತ್ತೆ 20 ವರ್ಷಗಳವರೆಗೆ ವಿಸ್ತರಿಸಿ, ತಿದ್ದುಪಡಿ ತರಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಮುಖ್ಯಾಧಿಕಾರಿಗೆ ಕಟ್ಟಡ ಪರವಾನಗಿ ಅಧಿಕಾರ:
ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಮನೆ ಮತ್ತಿತರ ಕಟ್ಟಡಗಳ ನಿರ್ಮಾಣಕ್ಕೆ ಪರವಾನಗಿ ನೀಡುವುದು ವಿಳಂಬವಾಗುತ್ತಿರುವುದನ್ನು ತಪ್ಪಿಸಲು ಮುಖ್ಯಾಧಿಕಾರಿಗಳಿಗೆ ಹೊಣೆ ನೀಡುವ ಕರ್ನಾಟಕ ಮುನ್ಸಿಪಾಲಿಟಿಗಳು ಮತ್ತು ಇತರೆ ಕಾನೂನು ತಿದ್ದುಪಡಿ ಮಸೂದೆಗೆ ಅಂಗೀಕಾರ ಸಿಕ್ಕಿತು.
ಜನರು ಅರ್ಜಿ ಸಲ್ಲಿಸಿದ 30 ದಿನಗಳ ಒಳಗೆ ಪರವಾನಗಿ ನೀಡಬೇಕು. ನಂತರ ನಡೆಯುವ ಕೌನ್ಸಿಲ್ನಲ್ಲಿ ಅನುಮತಿ ಪಡೆಯಬೇಕು ಎಂಬ ಷರತ್ತು ವಿಧಿಸಲಾಗಿದೆ.
ಶೇ 20ರಷ್ಟು ಮೊತ್ತ ಠೇವಣಿ ಕಡ್ಡಾಯ:
ಸೌಹಾರ್ದ ಸಹಕಾರಿ ಸಂಸ್ಥೆಗಳು ಸಂಗ್ರಹಿಸಿದ ಠೇವಣಿಯಲ್ಲಿ ಶೇ 20ರಷ್ಟು ಮೊತ್ತವನ್ನು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಡಿಸಿಸಿ) ಅಥವಾ ಅಪೆಕ್ಸ್ ಬ್ಯಾಂಕ್ಗಳಲ್ಲಿ ಠೇವಣಿ ಇಡುವುದನ್ನು ಕಡ್ಡಾಯಗೊಳಿಸುವ ‘ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ಮಸೂದೆ’ಯನ್ನು ಅಂಗೀಕರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.