ADVERTISEMENT

ವಿ.ಪಿ. ಇಕ್ಕೇರಿ ಜನ್ಮದಿನಾಂಕದ ಪ್ರವರ: ಏಕಸದಸ್ಯ ನ್ಯಾಯಪೀಠದ ಆದೇಶಕ್ಕೆ ತಡೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 2:57 IST
Last Updated 25 ನವೆಂಬರ್ 2022, 2:57 IST
   

ಬೆಂಗಳೂರು: ನಿವೃತ್ತ ಐಎಎಸ್‌ ಅಧಿಕಾರಿ ವಿ.ಪಿ. ಇಕ್ಕೇರಿ ಅಲಿಯಾಸ್ ಯಶವಂತಪ್ಪ ಪಿ.ಇಕ್ಕೇರಿ ಅವರ ಜನ್ಮದಿನಾಂಕವನ್ನು ಸರ್ಕಾರದ ಸೇವಾ ದಾಖಲೆಗಳಲ್ಲಿ ಬದಲಾಯಿಸುವಂತೆ ನಿರ್ದೇಶಿಸಿ ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠ ನೀಡಿದ್ದ ಆದೇಶಕ್ಕೆ ವಿಭಾಗೀಯ ನ್ಯಾಯಪೀಠ ತಡೆ ನೀಡಿದೆ.

‘ಒಂದು ತಿಂಗಳ ಒಳಗಾಗಿ ಅರ್ಜಿದಾರರ ಜನ್ಮದಿನಾಂಕವನ್ನು ಸೇವಾ ದಾಖಲೆಯಲ್ಲಿ ಬದಲಾಯಿಸಬೇಕು’ ಎಂದು ನ್ಯಾಯಮೂರ್ತಿ ಎಸ್.ಸುನಿಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ 2022ರ ಆಗಸ್ಟ್‌ 10ರಂದು ಆದೇಶಿಸಿತ್ತು.

‘ತಿಂಗಳು ಕಳೆದರೂ ಜನ್ಮದಿನಾಂಕವನ್ನು ಸೇವಾ ದಾಖಲೆಯಲ್ಲಿ ಬದಲಾಯಿಸಿಲ್ಲ’ ಎಂದು ಆಪಾದಿಸಿ ಇಕ್ಕೇರಿ ಅವರು ವಿಭಾಗೀಯ ನ್ಯಾಯಪೀಠದಲ್ಲಿ ಸಿವಿಲ್‌ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿದ್ದು, ಇದನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ADVERTISEMENT

ಇಕ್ಕೇರಿ ಪರ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಮತ್ತು ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ ವಾದಿಸಿದರು. ಪ್ರಕರಣದ ಎರಡನೇಪ್ರತಿವಾದಿ ಕೆಪಿಎಸ್‌ಸಿ ಕಾರ್ಯದರ್ಶಿ ವಿಕಾಸ್ ಕಿಶೋರ್ ಸುರಳ್ಕರ್‌ ಅವರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು. ಇಕ್ಕೇರಿ ಪರ ಶಿವಪ್ರಸಾದ್ ಶಾಂತನಗೌಡರ ವಕಾಲತ್ತು ವಹಿಸಿದ್ದರು.

ನಿವೃತ್ತರಾಗಿರುವ ವಿ.ಪಿ. ಇಕ್ಕೇರಿ 2020ರ ಜುಲೈ 14ರಂದು ಅಧಿಕಾರಿ ವಿಭಾಗದಿಂದ ಕೆಪಿಎಸ್‌ಸಿ ಸದಸ್ಯರಾಗಿ ನೇಮಕವಾಗಿ
ದ್ದರು. ಸರ್ಕಾರದ ಸೇವಾ ದಾಖಲೆಯಲ್ಲಿ ಅವರ ಜನ್ಮ ದಿನಾಂಕ 20.06.1960 ಎಂದು ಇದ್ದು, 2022ರ ಜುಲೈ 18ರಂದು ಕೆಪಿಎಸ್‌ಸಿ ಸದಸ್ಯತ್ವದ ಅವಧಿ ಮುಕ್ತಾಯಗೊಂಡಿತ್ತು. ಏತನ್ಮಧ್ಯೆ ಇಕ್ಕೇರಿ ಅವರು, ‘ಜನ್ಮದಿನಾಂಕ ತಪ್ಪಾಗಿದ್ದು ಅದನ್ನು ಸರಿಪಡಿಸಿ’ ಎಂದು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಈ ಬಗ್ಗೆ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ಅಸಲು ದಾವೆ ಹೂಡಿದ್ದರು. ಸೆಷನ್ಸ್‌ ನ್ಯಾಯಾಲಯ ಅವರ ಜನ್ಮದಿನವನ್ನು 1961ರ ನವೆಂಬರ್ 14 ಎಂದು ಘೋಷಿಸಿ ಡಿಕ್ರಿ ನೀಡಿತ್ತು. ಈ ಡಿಕ್ರಿ ಆಧರಿಸಿ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಲಾಗಿದ್ದರಿಟ್ ಅರ್ಜಿಯನ್ನು ಏಕಸದಸ್ಯ ನ್ಯಾಯಪೀಠ ವಿಲೇವಾರಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.