ಬೆಂಗಳೂರು: ನಗರದ ಕತ್ರಿಗುಪ್ಪೆ ಬಳಿ ರಸ್ತೆಯಲ್ಲಿ ಸ್ಫೋಟಕ ಮಾದರಿಯ ಅನುಮಾನಾಸ್ಪದ ವಸ್ತುವೊಂದು ಗುರುವಾರ ಬೆಳಿಗ್ಗೆ ಪತ್ತೆಯಾಗಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಮಾಹಿತಿ ಸಿಕ್ಕಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಹನುಮಂತ ನಗರ ಠಾಣೆಯ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳ ಕೂಡ ಸ್ಥಳಕ್ಕೆ ತೆರಳಿದೆ. ವಸ್ತುವನ್ನು ತಕ್ಷಣ ಸೀಲ್ ಮಾಡಿದ ಪೊಲೀಸರು, ಪರೀಕ್ಷೆಗಾಗಿ ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ.
'ಹನುಮಂತನಗರದಲ್ಲಿ ಪತ್ತೆಯಾದ ಸ್ಪೋಟಕ ವಸ್ತುವನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆತಂಕಪಡುವ ಅಗತ್ಯ ಇಲ್ಲ' ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ತಿಳಿಸಿದರು. ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಮಾತನಾಡಿ, 'ಮೇಲ್ನೋಟಕ್ಕೆ ಪಟಾಕಿ ಎಂದು ಕಂಡುಬಂದಿದೆ. ತಕ್ಷಣ ಬಾಂಬ್ ಸ್ಕ್ವಾಡ್ ಮತ್ತು ಎಫ್ಎಸ್ಎಲ್ ಕರೆಸಿ ಪರಿಶೀಲನೆ ನಡೆಸಿದ್ದೇವೆ' ಎಂದರು.
'ಅನುಮಾನಾಸ್ಪದ ವಸ್ತುವನ್ನು ಮಡಿವಾಳದ ಎಫ್ಎಸ್ಎಲ್ಗೆ ಕಳುಸಿದ್ದೇವೆ. ಯಾರೊ ಮನೆಯಲ್ಲಿದ್ದ ಪಟಾಕಿ ಮಾದರಿಯ ವಸ್ತುವನ್ನು ಬಿಸಾಡಿರಬೇಕು. ಮಳೆ ಬಂದಾಗ ಕೊಳಚೆ ನೀರಿನ ಮೂಲಕ ಹರಿದು ಬಂದಿರುವ ಸಾಧ್ಯತೆ ಇದೆ. ಯಾವುದೇ ಆತಂಕವಿಲ್ಲ. ಎಫ್ಎಸ್ಎಲ್ ವರದಿ ಬಳಿಕ ಹೆಚ್ಚಿನ ಮಾಹಿತಿ ಹೊರಬರಬೇಕಿದೆ' ಎಂದೂ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.