ಆರ್.ಎಂ. ಮಂಜುನಾಥ ಗೌಡ
ಬೆಂಗಳೂರು: ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನಲ್ಲಿ (ಡಿಸಿಸಿ) ನಕಲಿ ಚಿನ್ನಾಭರಣ ಅಡವಿಟ್ಟು ₹62.77 ಕೋಟಿ ಸಾಲ ಪಡೆದಿದ್ದ ಪ್ರಕರಣದಲ್ಲಿ, ಬ್ಯಾಂಕ್ನ ಹಾಲಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಅವರನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಬಂಧಿಸಿದೆ. ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯವು ಅವರನ್ನು 14 ದಿನಗಳವೆಗೆ ಇ.ಡಿ. ಬಂಧನಕ್ಕೆ ಒಪ್ಪಿಸಿದೆ.
2014ರಲ್ಲಿ ಮಂಜುನಾಥಗೌಡ ಅವರು ಬ್ಯಾಂಕ್ನ ಅಧ್ಯಕ್ಷರಾಗಿದ್ದಾಗ ಈ ಅಕ್ರಮ ನಡೆದಿತ್ತು. ಆಗ ತನಿಖೆ ನಡೆಸಿದ್ದ ಸಿಐಡಿ, ಮಂಜುನಾಥಗೌಡ ಅವರನ್ನು ಬಂಧಿಸಿತ್ತು. ಅವರು ಜಾಮೀನು ಪಡೆದು ಬಿಡುಗಡೆಯಾಗಿದ್ದರು. ಬ್ಯಾಂಕ್ನಲ್ಲಿ ನಡೆದ ಬಹುಕೋಟಿ ಪ್ರಕರಣವಾದ ಕಾರಣಕ್ಕೆ ಇ.ಡಿ ತನಿಖೆ ಆರಂಭಿಸಿತ್ತು. ಇ.ಡಿ ತನಿಖೆಗೆ ಮಂಜುನಾಥಗೌಡ ಹೈಕೋರ್ಟ್ನಿಂದ ತಂದಿದ್ದ ತಡೆ ಈಚೆಗಷ್ಟೇ ತೆರವಾಗಿತ್ತು.
ಬೆಂಗಳೂರಿನ ಚಾಮರಾಜನಗರದಲ್ಲಿರುವ ಅಪೆಕ್ಸ್ ಬ್ಯಾಂಕ್ ಅತಿಥಿಗೃಹಕ್ಕೆ ಸೋಮವಾರ ರಾತ್ರಿ ಬಂದಿದ್ದ ಮಂಜುನಾಥಗೌಡ ಅವರನ್ನು ಇ.ಡಿ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ವಶಕ್ಕೆ ಪಡೆದಿದ್ದರು. ಸತತ 11 ತಾಸು ವಿಚಾರಣೆ ಬಳಿಕ ಸಂಜೆ 7ರ ವೇಳೆಗೆ ಇ.ಡಿ ಕಚೇರಿಗೆ ಅವರನ್ನು ಕರೆದೊಯ್ಯಲಾಗಿತ್ತು.
ಅಲ್ಲಿ ಮತ್ತೆ ವಿಚಾರಣೆ ನಡೆಸಿ, ತಡರಾತ್ರಿ ಬಂಧಿಸಲಾಗಿತ್ತು. ಬುಧವಾರ ಆರ್ಥಿಕ ಅಪರಾಧಗಳ ನ್ಯಾಯಾಲಯದ ನ್ಯಾಯಾಧೀಶರ ಎದುರು ಮಂಜುನಾಥಗೌಡ ಅವರನ್ನು ಹಾಜರುಪಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.