ಮಂಡ್ಯ: ನಗರದ ಮೈಷುಗರ್ ಕಾರ್ಖಾನೆಗೆ ಕಬ್ಬು ತಂದಿದ್ದ ರೈತರೊಬ್ಬರಿಗೆ ಗುರುವಾರ ನಸುಕಿನಲ್ಲಿ ಹಾವು ಕಚ್ಚಿದ ಪರಿಣಾಮ ಅವರು ಕಾರ್ಖಾನೆ ಆವರಣದಲ್ಲೇ ಮೃತಪಟ್ಟಿದ್ದಾರೆ.
ತಾಲ್ಲೂಕಿನ ಬೇಲೂರು ಗ್ರಾಮದ ರೈತ ಬೊಮ್ಮಯ್ಯ (46) ಮೃತಪಟ್ಟವರು. ಕಚ್ಚಿದ ಹಾವನ್ನು ಕೊಂದು ತಾವೂ ಮೃತಪಟ್ಟಿದ್ದಾರೆ.
ಮೂರು ದಿನಗಳ ಹಿಂದೆ ಕಾರ್ಖಾನೆಗೆ ಕಬ್ಬು ತಂದಿದ್ದರು. ಕಬ್ಬು ಅರೆಯಲು ತಮ್ಮ ಸರದಿ ಗುರುವಾರ ನಸುಕಿನಲ್ಲಿ ಬಂದಿತ್ತು. ಎತ್ತಿನಗಾಡಿಯನ್ನು ಕಾರ್ಖಾನೆಗೆ ನೀಡುವಾಗ ಹಾವು ಕಚ್ಚಿದೆ. ತಕ್ಷಣ ಚಿಕಿತ್ಸೆ ಸಿಗದ ಕಾರಣ ಮೃತಪಟ್ಟಿದ್ದಾರೆ.
ರೈತರ ಆಕ್ರೋಶ: ಕಾರ್ಖಾನೆ ಆವರಣದಲ್ಲಿ ರೈತರಿಗೆ ಮೂಲ ಸೌಲಭ್ಯವಿಲ್ಲ. ಇದ್ದ ಒಂದು ಆಸ್ಪತ್ರೆಯೂ ಬಂದ್ ಆಗಿದೆ. ವೈದ್ಯರು ಸಿಕ್ಕಿದ್ದರೆ ರೈತನನ್ನು ಬದುಕಿಸಬಹುದಾಗಿತ್ತು. ಕಾರ್ಖಾನೆ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಲೇ ಸಾವು ಸಂಭವಿಸಿದೆ ಎಂದು ಆರೋಪಿಸಿ ರೈತರು ಆಕ್ರೋಶ ವ್ಯಕ್ತಪಡಿಸಿದರು. ಮೃತ ರೈತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.