ADVERTISEMENT

ರೈತರು, ಉತ್ತರ ಕರ್ನಾಟಕದ ಸಮಸ್ಯೆ ಪ್ರಸ್ತಾಪ: ಆಡಳಿತ–ವಿಪಕ್ಷಗಳ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 18:23 IST
Last Updated 9 ಡಿಸೆಂಬರ್ 2025, 18:23 IST
   

ಸುವರ್ಣ ವಿಧಾನಸೌಧ (ಬೆಳಗಾವಿ): ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಬಿಜೆಪಿಯ ಸಿ.ಟಿ.ರವಿ ಅವರು ಕಲಾಪದ ವೇಳೆ ನಿಯಮ 68ರ ಅಡಿಯಲ್ಲಿ ರೈತರು, ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ ವಿಚಾರಗಳು ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರ ಮಧ್ಯೆ ತೀವ್ರ ಜಟಾಪಟಿಗೆ ಕಾರಣವಾದವು.

ನಾರಾಯಣಸ್ವಾಮಿ ಅವರು, ‘ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆಯೇ ಚರ್ಚಿಸಬೇಕು ಎಂಬ ಉದ್ದೇಶದಿಂದ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧವನ್ನು ನಿರ್ಮಿಸಲಾಯಿತು. ಇಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಗೆ ಹೆಚ್ಚಿನ ಸಮಯ ನೀಡಬೇಕು’ ಎಂದರು.

‘ಕಬ್ಬಿಗೆ ಸರ್ಕಾರ ಪ್ರೋತ್ಸಾಹ ಬೆಲೆ ನಿಗದಿ ಮಾಡಿದ್ದರೂ ಕಾರ್ಖಾನೆ ಮಾಲೀಕರು ನೀಡುತ್ತಿಲ್ಲ. ಮೆಕ್ಕಜೋಳ ಖರೀದಿಗೆ ಬೆಂಬಲ ಬೆಲೆ ಘೋಷಿಸಿದ್ದರೂ ಖರೀದಿ ಕೇಂದ್ರಗಳನ್ನು ಆರಂಭಿಸಿಲ್ಲ. ಸರ್ಕಾರ ರೈತರ ಸಮಸ್ಯೆಗಳನ್ನು ಪೂರ್ಣ ಪ್ರಮಾಣದಲ್ಲಿ ಬಗೆಹರಿಸುತ್ತಿಲ್ಲ’ ಎಂದರು.

ADVERTISEMENT

 ‘ಕರ್ನಾಟಕ ಕೈಗಾರಿಕ ಪ್ರದೇಶಾಭಿವೃದ್ಧಿ ಮಂಡಳಿಯು ರಿಯಲ್‌ ಎಸ್ಟೇಟ್‌ ಏಜೆನ್ಸಿ ಆಗಿದೆ. ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಲು ಜಮೀನು ನೀಡುತ್ತಿದೆ’ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್‌, ‘ಉತ್ತರ ಕರ್ನಾಟಕ ಮತ್ತು ರೈತರ ಸಮಸ್ಯೆ ಬಗ್ಗೆ ಮಾತನಾಡಿ’ ಎಂದು ಹೇಳಿದರು.

ಸಿ.ಟಿ.ರವಿ, ‘ಪ್ರತಿ ಟನ್‌ ಕಬ್ಬಿಗೆ ಕೇಂದ್ರ ಸರ್ಕಾರವು ₹3,570 ಎಫ್‌ಆರ್‌ಪಿ ನಿಗದಿ ಮಾಡಿದೆ. ರಾಜ್ಯ ಸರ್ಕಾರವು ಅದಕ್ಕಿಂತ ಕಡಿಮೆ, ₹3,300ರಂತೆ ಕಬ್ಬು ಖರೀದಿಸುವಂತೆ ಆದೇಶಿಸಿದೆ’ ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ‘ಆ ಎಫ್‌ಆರ್‌ಪಿಯಲ್ಲಿ ಸಾಗಣೆ ವೆಚ್ಚ ಕಳೆದು, ಇಳುವರಿ ಪ್ರಮಾಣ ಆಧರಿಸಿ ರೈತರಿಗೆ ಸಿಗುವುದು ₹2,700 ಮಾತ್ರ. ಅದಕ್ಕಾಗಿಯೇ ರೈತರು ಹೋರಾಟ ನಡೆಸಿದ್ದು ಎಂಬ ಸತ್ಯವನ್ನು ಹೇಳಿ. ಸುಳ್ಳು ಹೇಳಿ ಸದನದ ಹಾದಿ ತಪ್ಪಿಸಬೇಡಿ’ ಎಂದು ಜೋರು ಮಾಡಿದರು. 

ರವಿ ಅವರು ತಮ್ಮ ಹಿಂದೆಯೇ ಇದ್ದ ಹಣಮಂತ ನಿರಾಣಿ ಅವರಿಂದ ಮಾಹಿತಿ ಪಡೆದುಕೊಂಡು, ‘ನಾನು ಎಫ್‌ಆರ್‌ಪಿ ಎಂದಷ್ಟೇ ಹೇಳಿದೆ. ಸಾಗಣೆ ವೆಚ್ಚ ಸೇರಿ ಅಥವಾ ಬಿಟ್ಟು ಎಂದು ಹೇಳಿಲ್ಲ’ ಎಂದು ಸಮಜಾಯಿಷಿ ನೀಡಿದರು.

ರವಿ ಅವರು ನೀರಾವರಿ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿ, ‘1964ರಲ್ಲಿ ಆರಂಭವಾದ ಕೃಷ್ಣಾ ಮೇಲ್ದಂಡೆ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ’ ಎನ್ನುತ್ತಿದ್ದಂತೆ ಹಲವು ಸಚಿವರು, ‘ಯೋಜನೆ ಸಂಬಂಧ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ತಿಳಿಸಿ’ ಎಂದು ಒತ್ತಾಯಿಸಿದರು.

ರವಿ, ‘ಭದ್ರಾ ಯೋಜನೆ ಪೂರ್ಣವಾಗಿಲ್ಲ’ ಎಂದಾಗ ಸಚಿವರು, ‘ನಿರ್ಮಲಾ ಸೀತಾರಾಮನ್‌ ಅವರು ಐದು ವರ್ಷಗಳ ಹಿಂದೆ ಬಜೆಟ್‌ನಲ್ಲಿ ಘೋಷಿಸಿದ್ದ ₹5,400 ಕೋಟಿಯನ್ನು ಕೊಡಿಸಿ’ ಎಂದು ಕೂಗಿದರು. ಸಚಿವ ಸಂತೋಷ್ ಲಾಡ್‌, ‘ಕೇಂದ್ರಕ್ಕೆ ಹತ್ತಾರು ಪತ್ರ ಬರೆದರೂ ನಿಮ್ಮ ಪ್ರಧಾನಿ, ಕೇಂದ್ರ ಸಚಿವರು ಸಮಯ ನೀಡುತ್ತಿಲ್ಲ. ನಿಯೋಗದೊಂದಿಗೆ ಬನ್ನಿ ಎಂದರೆ ನೀವು ಬರುತ್ತಿಲ್ಲ’ ಎಂದು ಹೇಳಿದರು.

ಛಲವಾದಿ ನಾರಾಯಣಸ್ವಾಮಿ, ‘ನಾವು ಕೇಂದ್ರವನ್ನು ಕೇಳಬೇಕು ಎಂದಾದರೆ ನೀವು ಏಕೆ ಇರಬೇಕು? ನೀವು ಕೇಂದ್ರಕ್ಕೆ ಪ್ರೇಮ ಪತ್ರ ಬರೆದರೆ ಸಾಲದು, ಬೀದಿಗಿಳಿದು ಹೋರಾಟ ಮಾಡಿ’ ಎಂದರು. ಈ ಹಂತದಲ್ಲಿ ಎರಡೂ ಕಡೆಯ ಸದಸ್ಯರು ಪರಸ್ಪರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಉಪ ಸಭಾಧ್ಯಕ್ಷ ಎಂ.ಕೆ.ಪ್ರಾಣೇಶ್ ಅವರು ಎಲ್ಲರನ್ನೂ ಕೂರಿಸಿ, ‘ವಿಷಯ ಪ್ರಸ್ತಾಪವನ್ನು ಮುಗಿಸಿ’ ಎಂದು ಸಿ.ಟಿ.ರವಿ ಅವರಿಗೆ ಸೂಚಿಸಿದರು.

ಯುಕೆಪಿ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಭಾತ್ಯಾಗ

ಬೆಳಗಾವಿ (ಸುವರ್ಣ ವಿಧಾನಸೌಧ): ‘ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಹಂತ- 3ರ ಅನುಷ್ಠಾನಕ್ಕೆ ಹಿಂದೆ ಸ್ವಾಧೀನಪಡಿಸಿಕೊಂಡ ಜಮೀನುಗಳ ರೈತರಿಗೆ ಈವರೆಗೆ ಪರಿಹಾರ ನೀಡಿಲ್ಲ. ಸುಮಾರು 5 ಸಾವಿರ ಪ್ರಕರಣಗಳು ನ್ಯಾಯಾಲಯಗಳ ಮೆಟ್ಟಿಲೇರಿವೆ. ನ್ಯಾಯಾಲಯ ಪರಿಹಾರ ನೀಡುವಂತೆ ಆದೇಶ ಮಾಡಿದ್ದರೂ ನೀಡುತ್ತಿಲ್ಲ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.

ವಿಧಾನಸಭೆಯಲ್ಲಿ ಯುಕೆಪಿ ವಿಷಯವನ್ನು ಯತ್ನಾಳ ಪ್ರಸ್ತಾಪಿಸಿದಾಗ ಪ್ರತಿಕ್ರಿಯಿಸಿದ ಜಲಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ‘ವಕೀಲರು ಹಾಗೂ ಅಧಿಕಾರಿಗಳು ಒಪ್ಪಂದ ಮಾಡಿಕೊಂಡು ಭೂ ಪರಿಹಾರ ನಿಗದಿ ಮಾಡಿಸಿದ್ದಾರೆ. ₹ 10 ಲಕ್ಷದ ಜಮೀನಿಗೆ ₹ 10 ಕೋಟಿ ಆದೇಶ ಮಾಡಿಸಿದರೆ ಕೊಡಲು ಸಾಧ್ಯವಿಲ್ಲ. ನಾನು ಇದನ್ನು ಒಪ್ಪುವುದಿಲ್ಲ. ನಾವು ರಾಜ್ಯದ ಹಿತ ಕಾಪಾಡಲು ಬದ್ಧ’ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಯತ್ನಾಳ, ‘ನ್ಯಾಯಾಲಯದ ಆದೇಶ ಹಾಗೂ ರೈತರಿಗೆ ಅವಮಾನ ಮಾಡಿದ್ದೀರಿ. ಈ ಅವಮಾನ ಖಂಡಿಸಿ ಸಭಾತ್ಯಾಗ ಮಾಡುತ್ತಿದ್ದೇನೆ’ ಎಂದು ಹೇಳಿ ಸದನದಿಂದ ಹೊರನಡೆದರು.

‘ಯುಕೆಪಿ- 3ರ ಅನುಷ್ಠಾನಕ್ಕೆ 2013ರಿಂದ ಇಲ್ಲಿಯವರೆಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸದೆ ಬಾಕಿ ಉಳಿಸಿಕೊಂಡಿದೆ. ಬಿಜೆಪಿ ನಾಯಕರು ಒತ್ತಡ ಹೇರಿ ಯೋಜನೆಗೆ ಅನುಮತಿ ಕೊಡಿಸಿದರೆ ಸಾಲ ಮಾಡಿಯಾದರೂ ಯೋಜನೆ ಪೂರ್ಣಗೊಳಿಸಲು ಬದ್ಧವಾಗಿದ್ದೇವೆ’ ಎಂದು ಶಿವಕುಮಾರ್ ಹೇಳಿದರು.

‘ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರವಾಗಿ ಸಿದ್ದರಾಮಯ್ಯ ಅವರು ಹಾಗೂ ನಾವು ಚರ್ಚೆ ಮಾಡಿ ಭೂ ಪರಿಹಾರದ ಬಗ್ಗೆ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದ್ದೇವೆ. ಎಲ್ಲಿಂದಾದರೂ ಹಣ ತಂದು ವೆಚ್ಚ ಮಾಡಲು ಯೋಜನೆ ರೂಪಿಸಿದ್ದೇವೆ. ವರ್ಷಕ್ಕೆ ಸುಮಾರು ₹ 20 ಸಾವಿರ ಕೋಟಿ ಬೇಕು. ಮುಂದಿನ ಮೂರ್ನಾಲ್ಕು ವರ್ಷದಲ್ಲಿ ಭೂಸ್ವಾಧೀನ ಪೂರ್ಣಗೊಳಿಸಬೇಕು ಎಂದು ಹೊರಟಿದ್ದೇವೆ. ಕೆಲವು ಕಡೆ ಕೆಲಸವನ್ನೂ ಆರಂಭಿಸಿದ್ದೇವೆ’ ಎಂದು ಹೇಳಿದರು.

ಈವರೆಗೆ ₹50,452 ಕೋಟಿ ವೆಚ್ಚ: ‘ಈ ಯೋಜನೆಗೆ 188 ಗ್ರಾಮಗಳ 75,563 ಎಕರೆ ಜಮೀನು ಮುಳುಗಡೆಯಾಗುತ್ತದೆ. ಈ ಪೈಕಿ 2,543 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡು ಪರಿಹಾರ ವಿತರಿಸಲಾಗಿರುತ್ತದೆ. ನವೆಂಬರ್‌ವರೆಗೆ ಭೂಸ್ವಾಧೀನ ಹಾಗೂ ಪುನರ್‌ ನಿರ್ಮಾಣ ವೆಚ್ಚ ಸೇರಿದಂತೆ ₹ 50,452 ಕೋಟಿ ವೆಚ್ಚ ಭರಿಸಲಾಗಿದೆ’ ಎಂದು ಶಿವಕುಮಾರ್‌ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.