ADVERTISEMENT

ಇಬ್ಬರು ಮಕ್ಕಳನ್ನು ಕೊಂದ ತಂದೆ: ಪೋಲಿಸರ ವಶಕ್ಕೆ ಆರೋಪಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2020, 6:21 IST
Last Updated 21 ಮಾರ್ಚ್ 2020, 6:21 IST
   

ಬೆಂಗಳೂರು: ತಾನು ಹೇಳಿದಂತೆ ಕೇಳುತ್ತಿಲ್ಲ ಎಂದು ತನ್ನ ಇಬ್ಬರು ಮಕ್ಕಳನ್ನು ತಂದೆಯೇ ಕತ್ತು ಹಿಸುಕಿ, ಉಸಿರು ಗಟ್ಟಿಸಿ ಕೊಲೆ ಮಾಡಿದ ಘಟನೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಅಕ್ಷಯನಗರದ ಹನಿ ಡೀವ್ ಅಪಾರ್ಟ್ಮೆಂಟ್ ನಲ್ಲಿ ಈ ಘಟನೆ ನಡೆದಿದ್ದು, ತೌಶಿನಿ (3) ಮತ್ತು ಶಾಸ್ತಾ (1.5) ಕೊಲೆಯಾದ ಮಕ್ಕಳು ಎಂದು ಗುರುತಿಸಲಾಗಿದೆ. ಕೊಲೆ ಮಾಡಿರುವ ತಂದೆ, ಕೇರಳ ಜತಿನ್ (35) ಮಾನಸಿಕ ಅಸ್ವಸ್ಥ ಎನ್ನಲಾಗಿದೆ.

ತಮಿಳುನಾಡಿನ ನಿವಾಸಿ, ಸಾಫ್ಟ್ ವೇರ್ ಎಂಜಿನಿಯರ್ ಲಕ್ಷ್ಮಿ ಶಂಕರಿ ಎಂಬಾಕೆಯನ್ನು ಪ್ರೀತಿಸಿ ಕೆಲವು ವರ್ಷಗಳ ಹಿಂದೆ ಜತಿನ್ ಮದುವೆಯಾಗಿದ್ದ. ಲಕ್ಷ್ಮಿ ಕೆಲಸಕ್ಕೆ ಹೋಗುತ್ತಿದ್ದರೆ, ಈತ ಎಲ್ಲೂ ಹೋಗದೆ ಮನೆಯಲ್ಲೇ ಇದ್ದ. ಅಲ್ಲದೆ, ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ. ಇದೇ ಕಾರಣಕ್ಕೆ ಗಂಡ ಹೆಂಡತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಶುಕ್ರವಾರ ಕೂಡಾ ಜಗಳ ನಡೆದಿದ್ದು, ಈ ವೇಳೆ ಆತ ಮಕ್ಕಳ ಮೇಲೆ ಕ್ರೌರ್ಯ ಮೆರೆದಿದ್ದಾನೆ ಎಂದೂ ಗೊತ್ತಾಗಿದೆ.

ADVERTISEMENT

ಶುಕ್ರವಾರ ಕೂಡಾ ಲಕ್ಷ್ಮಿ ಕೆಲಸಕ್ಕೆ ಹೋಗಿದ್ದರು. ಆದರೆ, ಮನೆಯಲ್ಲೇ ಇದ್ದ ಜತಿನ್, ಮಕ್ಕಳು ತಾನು ಹೇಳಿದ್ದು ಕೇಳಿಲ್ಲ ಎಂಬ ಕಾರಣಕ್ಕೆ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಘಟನೆ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.