ಬೆಂಗಳೂರು: ಕೊರೊನಾ ಲಾಕ್ಡೌನ್ನಿಂದಾಗಿ ತೀವ್ರ ಆರ್ಥಿಕ ಸಂಕಷ್ಟ ಇದೆ. ಹೀಗಾಗಿ ಈ ವರ್ಷ ಪದವಿಪೂರ್ವ ಕಾಲೇಜುಗಳು ಕಳೆದ ವರ್ಷದಷ್ಟೇ ಶುಲ್ಕ ವಿಧಿಸಬೇಕು ಇಲ್ಲವೇ ಕಡಿಮೆ ಶುಲ್ಕ ಪಡೆಯಬೇಕು ಎಂಬ ಸರ್ಕಾರದ ಸೂಚನೆಯನ್ನು ಹಲವು ಕಾಲೇಜುಗಳು ಗಾಳಿಗೆ ತೂರಿವೆ.
ರಾಜ್ಯದ ನಾನಾ ಕಡೆಗಳಲ್ಲಿ ದ್ವಿತೀಯ ಪಿಯು ತರಗತಿಗಳಿಗೆ ಪ್ರವೇಶಾತಿ ಇದೀಗ ನಡೆಯುತ್ತಿದೆ. ಹಲವೆಡೆ ₹ 5 ಸಾವಿರದಿಂದ ₹ 30 ಸಾವಿರದವರೆಗೆ ಶುಲ್ಕ ಹೆಚ್ಚಳ ಮಾಡಿರುವ ಬಗ್ಗೆ ದೂರುಗಳು ಬಂದಿವೆ.
‘ನಗರದ ಸಹಕಾರ ನಗರದ ಕಾಲೇಜೊಂದರಲ್ಲಿ ನನ್ನ ಮಗನ ದ್ವಿತೀಯ ಪಿಯು ಪ್ರವೇಶಾತಿಗೆ ಬಂದಿದ್ದೇನೆ. ಕಳೆದ ವರ್ಷ ನಿಗದಿಯಾಗಿದ್ದಂತೆ ಈ ವರ್ಷ ₹ 1.40 ಲಕ್ಷ ಶುಲ್ಕವನ್ನು ಮಾತ್ರ ಕಾಲೇಜು ಪಡೆಯಬೇಕಿತ್ತು. ಆದರೆ ₹ 1.70 ಲಕ್ಷ ಶುಲ್ಕ ಕೊಡಬೇಕು ಎಂದು ಕೇಳುತ್ತಿದ್ದಾರೆ. ಇದು ಸರ್ಕಾರದ ಸೂಚನೆಯ ಸ್ಪಷ್ಟ ಉಲ್ಲಂಘನೆ ಅಲ್ಲವೇ?’ ಎಂದು ಪೋಷಕರೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಏಪ್ರಿಲ್ ಕೊನೆಯಲ್ಲಿ ಸುತ್ತೋಲೆ ಹೊರಡಿಸಿದ್ದ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು, ಲಾಕ್ಡೌನ್ನಿಂದಾಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪೋಷಕರಿಗೆ ದ್ವಿತೀಯ ಪಿಯು ಪ್ರವೇಶಾತಿ ವೇಳೆ ಕಳೆದ ವರ್ಷಕ್ಕಿಂತ ಹೆಚ್ಚಿಗೆ ಶುಲ್ಕ ಪಡೆಯುವಂತಿಲ್ಲ, ಒಂದು ವೇಳೆ ಈ ಬಗ್ಗೆ ದೂರು ಬಂದರೆ ಕ್ರಮ ಅಂತಹ ಕಾಲೇಜುಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಸಿಗಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.