ಪ್ರಾತಿನಿಧಿಕ ಚಿತ್ರ
ಬೆಂಗಳೂರು: ವೈದ್ಯಕೀಯ, ಎಂಜನಿಯರಿಂಗ್ ಸೆರಿದಂತೆ ವಿವಿಧ ವೃತ್ತಿ ಶಿಕ್ಷಣ ಕೋರ್ಸ್ಗಳಿಗೆ ಪ್ರವೇಶ ಪಡೆದು, ಅನಿವಾರ್ಯ ಕಾರಣಗಳಿಂದ ಮಧ್ಯಂತರದಲ್ಲೇ ಕಾಲೇಜು ತೊರೆಯುವ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಸೇರಿದಂತೆ ಮೂಲ ದಾಖಲೆಗಳನ್ನು ನೀಡುವಂತೆ ಶುಲ್ಕ ನಿಯಂತ್ರಣ ಸಮಿತಿ ಆದೇಶಿಸಿದೆ.
ದೂರುಗಳ ವಿಚಾರಣೆ ನಡೆಸಿದ ಶುಲ್ಕ ನಿಯಂತ್ರಣ ಸಮಿತಿಯ ಅಧ್ಯಕ್ಷರೂ ಆಗಿರುವ ನ್ಯಾಯಮೂರ್ತಿ ಬಿ. ಶ್ರೀನಿವಾಸ ಗೌಡ ಅವರು, ವಿದ್ಯಾರ್ಥಿಗಳ ಮೂಲ ದಾಖಲೆಗಳನ್ನು ವಾಪಸ್ ನೀಡುವಂತೆ ಸೂಚಿಸಿದ್ದಾರೆ.
ದಾಖಲೆಗಳನ್ನು ಹಿಂದಿರುಗಿಸಲು ಕೆಎಲ್ಇ ಸಂಸ್ಥೆ ₹4 ಲಕ್ಷ ನೀಡುವಂತೆ ಒತ್ತಾಯಿಸುತ್ತಿದೆ ಎಂದು ಸ್ನಾತಕೋತ್ತರ ದಂತ ವೈದ್ಯಕೀಯ (ಎಂಡಿಎಸ್) ವಿದ್ಯಾರ್ಥಿಯೊಬ್ಬರು ದೂರು ನೀಡಿದ್ದರು. ದೂರಿನ ವಿಚಾರಣೆಗೆ ಹಾಜರಾದ ಸಂಸ್ಥೆಯ ಪ್ರತಿನಿಧಿ, ‘ವಿದ್ಯಾರ್ಥಿಗಳು ಮಧ್ಯದಲ್ಲೇ ಕೋರ್ಸ್ ತೊರೆದರೆ ಸೀಟು ಖಾಲಿ ಉಳಿಯುತ್ತದೆ. ಬೇರೊಬ್ಬರಿಗೆ ಆ ಸೀಟು ನೀಡಲು ಅವಕಾಶ ಇಲ್ಲ. ಸಂಸ್ಥೆಗೂ ನಷ್ಟವಾಗುತ್ತದೆ’ ಎಂದು ಉತ್ತರ ನೀಡಿದ್ದರು. ಪರ–ವಿರೋಧ ವಾದ ಆಲಿಸಿದ ಸಮಿತಿ ‘ಆರ್ಥಿಕ ತೊಂದರೆಯಿಂದ ವಿದ್ಯಾರ್ಥಿ ಕೋರ್ಸ್ ತೊರೆದು, ಉದ್ಯೋಗ ಮಾಡುತ್ತಿದ್ದಾರೆ. ಕಾರಣ ₹50 ಸಾವಿರ ಪಡೆದು ಅವರಿಗೆ ಮೂಲ ದಾಖಲೆ ನೀಡುವಂತೆ’ ಆದೇಶ ನೀಡಿದೆ.
ಮತ್ತೆರಡು ಪ್ರಕರಣದಲ್ಲಿ ಕೇಂಬ್ರಿಡ್ಜ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿರುದ್ಧವೂ ವಿದ್ಯಾರ್ಥಿಗಳ ದಾಖಲೆಗಳನ್ನು ತಡೆಹಿಡಿದಿರುವ ಕುರಿತು ದೂರುಗಳು ಬಂದಿದ್ದವು. ಈ ಪ್ರಕರಣಗಳಲ್ಲಿ ಆರೋಗ್ಯ ಸಮಸ್ಯೆ, ಸ್ಪರ್ಧಾ ಪರೀಕ್ಷೆಯ ಸಿದ್ಧತೆಯ ಕಾರಣಗಳನ್ನು ನೀಡಿದ್ದರಿಂದ ದಾಖಲೆ ಹಿಂದಿರುಗಿಸಲು ಸಮಿತಿ ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.