ADVERTISEMENT

ಆನೆ ತಡೆಗೆ ತಂತಿ ಬೇಲಿ: ಸೋಮಣ್ಣ ಪತ್ರ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2021, 19:49 IST
Last Updated 20 ಮಾರ್ಚ್ 2021, 19:49 IST

ಬೆಂಗಳೂರು: ’ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಯಲವನಾಥ ಗ್ರಾಮ ಹಾಗೂ ಸುತ್ತಮುತ್ತ ಆನೆ ಹಾಗೂ ಮಾನವ ಸಂಘರ್ಷ ತಡೆಯಲು ಒಂದು ಕಿ.ಮೀ ವ್ಯಾಪ್ತಿಯಲ್ಲಿ ಆನೆ ತಡೆಗೆ ತಂತಿ ಬೇಲಿ ಅಳವಡಿಸಬೇಕು’ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿಗೆ ವಸತಿ ಸಚಿವ ವಿ.ಸೋಮಣ್ಣ ಪತ್ರ ಬರೆದಿದ್ದಾರೆ.

ಸ್ಥಳೀಯ ಗ್ರಾಮಸ್ಥರು ಮಾಡಿದ ಮನವಿ ಮೇರೆಗೆ ಸೋಮಣ್ಣ ಈ ಪತ್ರ ಬರೆದಿದ್ದಾರೆ.

'ಬಿಳಿಕಲ್‌ ದಟ್ಟ ಅರಣ್ಯ ಪ್ರದೇಶದಿಂದ ಆವೃತವಾಗಿರುವ ಗ್ರಾಮದಲ್ಲಿ ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರೈತರು ಸಮೃದ್ಧವಾಗಿ ಬೆಳೆಯುವ ರಾಗಿ, ಹಿಪ್ಪುನೇರಳೆ ಹಾಗೂ ತರಕಾರಿ ಬೆಳೆಗಳನ್ನು ತಿನ್ನಲು ಹಾಗೂ ಹೇರಳವಾದ ನೀರಿನ ಲಭ್ಯತೆ ಇರುವುದರಿಂದ ಬಾಯಾರಿಕೆ ತಣಿಸಿಕೊಳ್ಳಲು ಅರಣ್ಯ ಪ್ರದೇಶದಿಂದ ಆನೆಗಳು ಹಿಂಡಾಗಿ ಜಮೀನುಗಳಿಗೆ ಲಗ್ಗೆ ಇಡುತ್ತಿವೆ. ಇದು ಮಾನವ-ಆನೆ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತಿದೆ’ ಎಂದು ಪತ್ರದಲ್ಲಿ ವಸತಿ ಸಚಿವರು ವಿವರಿಸಿದ್ದಾರೆ.

ADVERTISEMENT

ಆನೆ- ಮಾನವ ಸಂಘರ್ಷ ತಡೆಯಲು ಈಗಾಗಲೇ ರಾಜ್ಯದಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಪ್ರತಿ ಕಿ.ಮೀಟರ್‌ಗೆ ₹ 1 ಕೋಟಿ ವೆಚ್ಚವಾಗುವುದೆಂದು ಅಂದಾಜಿಸಲಾಗಿದೆ. ತಮಿಳುನಾಡಿನ ಹೊಸೂರು ಅರಣ್ಯ ಪ್ರದೇಶದ ಗಡಿಯಲ್ಲಿ ಆನೆ ತಡೆಗೆ ತಂತಿ ಬೇಲಿ' ಅಳವಡಿಸಿ ಆನೆ– ಮಾನವ ಸಂಘರ್ಷ ತಡೆಗಟ್ಟುವಲ್ಲಿ ಯಶಸ್ವಿಯಾಗಿದೆ ಮತ್ತು ಈ ರೀತಿಯ ಬೇಲಿ ಅಳವಡಿಕೆಗೆ ಪ್ರತಿ ಕಿ.ಮೀಟರ್‌ಗೆ ಅಂದಾಜು ₹ 40 ಲಕ್ಷ ವೆಚ್ಚವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ಆನೆ ತಡೆಗೆ ತಂತಿ ಬೇಲಿ' ಅನ್ನು ಪ್ರಾಯೋಗಿಕವಾಗಿ ಅಳವಡಿಸಿ ಅಧ್ಯಯನ ನಡೆಸಲು ಮತ್ತು ಅಧ್ಯಯನದ ಫಲಿತಾಂಶ ಪೂರಕವಾಗಿ ಇದ್ದರೆ ಇಡೀ ರಾಜ್ಯದಲ್ಲಿ ಈ ವ್ಯವಸ್ಥೆ ಅಳವಡಿಸಿಕೊಳ್ಳಬಹುದು ಎಂದೂ ಪತ್ರದಲ್ಲಿ ಸೋಮಣ್ಣ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.