ADVERTISEMENT

ಶಿಕ್ಷಣ ನೀತಿ ಜಾರಿಗೆ ಕಾರ್ಯಪಡೆಯಿಂದ 2 ದಿನದಲ್ಲಿ ಅಂತಿಮ ವರದಿ: ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 11:07 IST
Last Updated 5 ನವೆಂಬರ್ 2020, 11:07 IST
ಅಶ್ವತ್ಥನಾರಾಯಣ
ಅಶ್ವತ್ಥನಾರಾಯಣ   

ಬೆಂಗಳೂರು: ‘ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗಾಗಿ ರಚಿಸಲಾಗಿರುವ ಕಾರ್ಯಪಡೆ ತನ್ನ ಅಂತಿಮ ಶಿಫಾರಸುಗಳ ಕರಡನ್ನು ಎರಡು ದಿನಗಳಲ್ಲಿ ಸರ್ಕಾರಕ್ಕೆ ಸಲ್ಲಿಸಲಿದೆ’ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

‘ರಾಷ್ಟ್ರೀಯ ಶಿಕ್ಷಣ ನೀತಿ-2020; ವಿಶ್ವ ಗುರುವಾಗುವತ್ತ ಭಾರತ’ ಎಂಬ ವಿಷಯದ ಬಗ್ಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಗುರುವಾರ ಏರ್ಪಡಿಸಿದ್ದ ವೆಬಿನಾರ್‌ನಲ್ಲಿ ಬೆಂಗಳೂರಿನಿಂದಲೇ ಪಾಲ್ಗೊಂಡು ಮಾತನಾಡಿದ ಅವರು, ‘ನಿವೃತ್ತ ಐಎಎಸ್‌ ಅಧಿಕಾರಿ ಎಸ್.ವಿ. ರಂಗನಾಥ್‌ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗಿದ್ದು, ಈ ಕಾರ್ಯಪಡೆ ಈಗಾಗಲೇ ಪ್ರಾಥಮಿಕ ಹಂತದ ಶಿಫಾರಸುಗಳನ್ನು ಸಲ್ಲಿಸಿದೆ. ಅಂತಿಮ ಹಂತದ ಶಿಫಾರಸುಗಳನ್ನು ಶನಿವಾರ ಸಲ್ಲಿಸಲಿದೆ’ ಎಂದರು.

‘ಉಳಿದ ರಾಜ್ಯಗಳಿಗಿಂತ ಮೊದಲೇ ಶಿಕ್ಷಣ ನೀತಿಯನ್ನು ಹಂತಹಂತವಾಗಿ ಜಾರಿ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಈ ಕಾರಣಕ್ಕೆ ಅಗತ್ಯವಾದ ಎಲ್ಲ ಹೆಜ್ಜೆಗಳನ್ನು ಇಡಲಾಗುತ್ತಿದೆ. ಇರುವ ವಿಶ್ವವಿದ್ಯಾಲಯಗಳಲ್ಲಿಯೇ 6 ಸಂಶೋಧನಾ ಹಾಗೂ 10 ಬೋಧನಾ ವಿವಿಗಳನ್ನು ರೂಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. 34 ಶಿಕ್ಷಣ ಸಂಸ್ಥೆಗಳನ್ನು ಸ್ವಾಯತ್ತ ಶಿಕ್ಷಣ ಸಂಸ್ಥೆಗಳನ್ನಾಗಿ ರೂಪಿಸಲಾಗುವುದು. ಎಲ್ಲೆಡೆ ಬಹುವಿಷಯಗಳ ಕಲಿಕೆ ಮತ್ತು ಬೋಧನೆಗೆ ಒತ್ತಾಸೆ ನೀಡಲಾಗುತ್ತಿದೆ. ಇದರಿಂದ ಸಮಾಜದಲ್ಲಿರುವ ಸಾಮಾಜಿಕ, ಆರ್ಥಿಕ ಮತ್ತಿತರೆ ಎಲ್ಲ ಸಮಸ್ಯೆಗಳಿಗೆ ಚರಮಗೀತೆ ಹಾಡುವುದು ನಮ್ಮ ಉದ್ದೇಶವಾಗಿದೆ’ ಎಂದೂ ಅವರು ಹೇಳಿದರು.

ADVERTISEMENT

‘ಈವರೆಗೂ ಪಠ್ಯೇತರ ಚಟುವಟಿಕೆಗೂ ಪಠ್ಯಕ್ಕೂ ಸಂಬಂಧ ಇಲ್ಲ. ಇನ್ನು ಮುಂದೆ ಹಾಗಾಗುವುದಿಲ್ಲ. ಪಠ್ಯೇತರ ವಲಯದಲ್ಲಿದ್ದ ಕ್ರೀಡೆ, ಕಲೆ, ಸಂಗೀತ ಮತ್ತಿತರೆ ವಿಷಯಗಳಲ್ಲಿಯೂ ಪಠ್ಯದ ವ್ಯಾಪ್ತಿಗೇ ಬರುತ್ತವೆ. ಆಗ ಜ್ಞಾನಾರ್ಜನೆಯ ದಿಕ್ಕಿನಲ್ಲಿ ವಿದ್ಯಾರ್ಥಿಗಳಿಗೆ ಆಯ್ಕೆ ಹೆಚ್ಚಾಗುತ್ತದೆ. ಅದರಿಂದ ಬಹ ಆಯಾಮದ ಪ್ರತಿಭೆಗಳು ನಮ್ಮ ಶೈಕ್ಷಣಿಕ ವ್ಯವಸ್ಥೆಯಿಂದ ಹೊರಹೊಮ್ಮಲಿವೆ’ ಎಂದು ಅವರು ನುಡಿದರು.

ಗಳಿಸಿದ ಜ್ಞಾನ ಸಮಾಜಕ್ಕೆ ಇರಲಿ: ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯಪಾಲ ವಜೂಭಾಯಿ ವಾಲ, ‘ಸಮಾಜಕ್ಕೆ ಒಳ್ಳೆಯದಾಗುವ ಹಾಗೂ ಎಲ್ಲ ಹಂತಗಳಲ್ಲೂ ಜ್ಞಾನವನ್ನು ಹೆಚ್ಚಿಸುವ ಕೆಲಸ ಆಗಬೇಕಿದೆ. ಮುಖ್ಯವಾಗಿ ವಿದ್ಯಾರ್ಥಿಗಳು ಗಳಿಸಿದ ಜ್ಞಾನವನ್ನು ಸಮಾಜಕ್ಕೇ ಮೀಸಲಿಡಬೇಕು. ಈ ವಿಷಯದಲ್ಲಿ ಬೋಧಕರ ಪಾತ್ರ ಅತಿದೊಡ್ಡದು’ ಎಂದರು.

‘ವಿದ್ಯಾರ್ಥಿಗಳಿಗೆ ತಾವು ಯಾಕೆ ಶಿಕ್ಷಣ ಪಡೆಯುತ್ತಿದ್ದೇವೆ? ಅದನ್ನು ಯಾವ ದಿಕ್ಕಿನಲ್ಲಿ, ಹೇಗೆ ಬಳಕೆ ಮಾಡಬೇಕು? ಗಳಿಸಿದ ಜ್ಞಾನವನ್ನು ಸಾರ್ಥಕಗೊಳಿಸಿಕೊಳ್ಳುವುದು ಹೇಗೆ? ಎಂಬ ಬಗ್ಗೆ ಅರಿವು ಮೂಡಿಸುವುದು ಮುಖ್ಯವಾದ ಸಂಗತಿ’ ಎಂದೂ ರಾಜ್ಯಪಾಲರು ಒತ್ತಿ ಹೇಳಿದರು.

ಆಧ್ಯಾತ್ಮ ಮತ್ತು ತಂತ್ರಜ್ಞಾನ ಒಟ್ಟಿಗಿರಲಿ: ವೆಬಿನಾರ್‌ ವೇದಿಕೆಯಲ್ಲಿ ಬೆಂಗಳೂರಿನಿಂದಲೇ ಭಾಗಿಯಾಗಿದ್ದ ಶ್ರೀ ರವಿಶಂಕರ್‌ ಗುರೂಜಿ, ‘ತಂತ್ರಜ್ಞಾನ ಮತ್ತು ಆಧ್ಯಾತ್ಮವನ್ನು ಬೇರೆಬೇರೆಯಾಗಿ ನೋಡಬಾರದು. ನಮ್ಮ ಮನಸ್ಸು ಮತ್ತು ದೇಹಕ್ಕೆ ಹೇಗೆ ಅವಿನಾಭಾವ ಸಂಬಂಧ ಇದೆಯೊ ಅದೇ ರೀತಿ ಆಧ್ಯಾತ್ಮಕ್ಕೂ ತಂತ್ರಜ್ಞಾನಕ್ಕೂ ಸಂಬಂಧ ಇದೆ. ಅವೆರಡೂ ಅಂಶಗಳೂ ಒಟ್ಟಾಗಿ ಇರಬೇಕು’ ಎಂದರು.

‘ನಮಗೆಲ್ಲರಿಗೂ ಗೊತ್ತಿರುವಂತೆ ತಂತ್ರಜ್ಞಾನ ಇಲ್ಲದಿದ್ದರೆ, ಜೀವನದಲ್ಲಿ ಆರಾಮ ಎನ್ನುವುದು ಇರುವುದಿಲ್ಲ. ಅದೇ ರೀತಿ ಮನಸ್ಸಿನಲ್ಲಿ ಶಾಂತಿ-ಪ್ರಸನ್ನತೆ ಇಲ್ಲದಿದ್ದರೆ ಜೀವನದಲ್ಲಿ ಶಾಂತಿ ಇರುವುದಿಲ್ಲ. ನಮ್ಮಲ್ಲಿ ಅಂತರ್‌ಶಾಂತಿ, ಪ್ರಸನ್ನತೆ ಇರಬೇಕಾದರೆ ಆಧ್ಯಾತ್ಮ ಬೇಕೇಬೇಕು. ಹೀಗಾಗಿ ಶಿಕ್ಷಣದಲ್ಲಿ ಜೀವನ ಮೌಲ್ಯಗಳನ್ನು ಅಳವಡಿಸಬೇಕು. ಅದಕ್ಕೆ ಮೌಲ್ಯಾಧಾರಿತ ಶಿಕ್ಷಣ ಅಗತ್ಯ’ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಮಿತಿ ಸದಸ್ಯ ಪ್ರೊ.ಎಂ.ಕೆ. ಶ್ರೀಧರ್‌, ಎಐಸಿಟಿಇ ಅಧ್ಯಕ್ಷ ಪ್ರೊ.ಅನಿಲ್‌ ಸಹಸ್ರಬುದ್ದೆ, ವಿಟಿಯು ವಿವಿಯ ಉಪ ಕುಲಪತಿ ಪ್ರೊ. ಕರಿಸಿದ್ದಪ್ಪ ಮಾತನಾಡಿದರು. ವೆಬಿನಾರ್‌ನಲ್ಲಿ ಪಾಲ್ಗೊಂಡವರು ಕೇಳಿದ ಪ್ರಶ್ನೆಗಳಿಗೆ ಶ್ರೀ ರವಿಶಂಕರ ಗುರೂಜಿ ಉತ್ತರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.