
ಹಣ
ನವದೆಹಲಿ: ಕರ್ನಾಟಕ ರಾಜ್ಯಕ್ಕೆ 15ನೇ ಹಣಕಾಸು ಆಯೋಗ ಶಿಫಾರಸು ಮಾಡಿರುವ ಯಾವುದೇ ವಿಶೇಷ ಅನುದಾನವನ್ನು ಬಾಕಿ ಇರಿಸಿಕೊಂಡಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.
ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಬಳ್ಳಾರಿ ಸಂಸದ ಇ.ತುಕಾರಾಮ್ ಕೇಳಿದ ಪ್ರಶ್ನೆಗೆ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಸೋಮವಾರ ಲಿಖಿತ ಉತ್ತರ ನೀಡಿದ್ದಾರೆ.
ರಾಜ್ಯಕ್ಕೆ ಆಗಿರುವ ವರಮಾನ ನಷ್ಟಕ್ಕೆ ₹5,495 ಕೋಟಿ ವಿಶೇಷ ಅನುದಾನ ನೀಡಬೇಕು ಎಂದು 15ನೇ ಹಣಕಾಸು ಆಯೋಗವು ಮೊದಲನೇ ವರದಿಯಲ್ಲಿ ಶಿಫಾರಸು ಮಾಡಿತ್ತು. ಬೆಂಗಳೂರು ಹಾಗೂ ಇತರ ಕಡೆಗಳಲ್ಲಿ ಕೆರೆಗಳ ಅಭಿವೃದ್ಧಿಗೆ ₹3,000 ಕೋಟಿ ಹಾಗೂ ಬೆಂಗಳೂರಿನ ಪೆರಿಫೆರಲ್ ವರ್ತುಲ ರಸ್ತೆ (ಪಿಆರ್ಆರ್) ಯೋಜನೆಗೆ ₹3 ಸಾವಿರ ಕೋಟಿ ವಿಶೇಷ ಅನುದಾನ ನೀಡಬೇಕು ಎಂದು ಆಯೋಗವು ಎರಡನೇ ವರದಿಯಲ್ಲಿ ತಿಳಿಸಿತ್ತು. ರಾಜ್ಯಕ್ಕೆ ಒಟ್ಟು ₹11,495 ಕೋಟಿ ವಿಶೇಷ ಅನುದಾನ ಬಾಕಿ ಇದೆ ಎಂದು ರಾಜ್ಯ ಸರ್ಕಾರವು ಕೇಂದ್ರ ಹಣಕಾಸು ಸಚಿವಾಲಯಕ್ಕೆ ಹಲವು ಸಲ ಪತ್ರ ಬರೆದಿತ್ತು ಹಾಗೂ ಮನವಿ ಸಲ್ಲಿಸಿತ್ತು.
ಜಿಎಸ್ಟಿಯಿಂದ ಆಗುವ ವರಮಾನ ನಷ್ಟ ಸರಿದೂಗಿಸಲು ಈಗಾಗಲೇ ಪರಿಹಾರ ನೀಡಲಾಗಿದೆ. ಹೊಸದಾಗಿ ಯಾವುದೇ ಪರ್ಯಾಯ ವ್ಯವಸ್ಥೆ ರೂಪಿಸಿಲ್ಲ ಎಂದು ಪಂಕಜ್ ಚೌಧರಿ ಸ್ಪಷ್ಟಪಡಿಸಿದ್ದಾರೆ.
ಜಿಎಸ್ಟಿ ಜಾರಿಯಾದ ಮೇಲೆ ರಾಜ್ಯಗಳಿಗೆ ಶೇ 14ರಷ್ಟು ನಷ್ಟ ಪರಿಹಾರ ನೀಡುವ ವ್ಯವಸ್ಥೆ 2017ರ ಜುಲೈನಲ್ಲಿ ಆರಂಭವಾಯಿತು. ಹೊಸ ತೆರಿಗೆ ವ್ಯವಸ್ಥೆ ಜಾರಿಯಾದ ಬಳಿಕ ರಾಜ್ಯಗಳಿಗೆ ಆಗುವ ನಷ್ಟವನ್ನು ಭರಿಸಲು ಈ ಯೋಜನೆ ಜಾರಿ ಮಾಡಲಾಗಿತ್ತು. ನಷ್ಟ ಪರಿಹಾರ ವ್ಯವಸ್ಥೆ 2022ರ ಜೂನ್ ಅಂತ್ಯಕ್ಕೆ ಕೊನೆಗೊಂಡಿತ್ತು. ಈ ವ್ಯವಸ್ಥೆ ಯನ್ನು ಮತ್ತೆ ಐದು ವರ್ಷ ವಿಸ್ತ ರಿಸಬೇಕು ಎಂದು ರಾಜ್ಯ ಸರ್ಕಾರ ಮನವಿ ಮಾಡಿತ್ತು. ಜತೆಗೆ, ಜಿಎಸ್ಟಿ ತೆರಿಗೆ ಹಂತಗಳನ್ನು ಈ ವರ್ಷ ಸರಳೀಕರಣ ಮಾಡಲಾ ಗಿತ್ತು. ಇದರಿಂದ ರಾಜ್ಯಕ್ಕೆ ವಾರ್ಷಿಕ ₹15 ಸಾವಿರ ಕೋಟಿ ವರಮಾನ ಖೋತಾ ಆಗ ಲಿದ್ದು, ಇದಕ್ಕೆ ಪರಿಹಾರ ನೀಡ ಬೇಕು ಎಂದೂ ರಾಜ್ಯ ಸರ್ಕಾರ ಆಗ್ರಹಿಸಿತ್ತು. ’ಅಂತಹ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ‘ ಎಂದು ತಿಳಿಸಿದ್ದಾರೆ.
ಹಣಕಾಸು ಸಚಿವಾಲಯವು 2025–26ನೇ ಸಾಲಿನಲ್ಲಿ ಕರ್ನಾಟಕಕ್ಕೆ ಬಡ್ಡಿ ರಹಿತ ಸಾಲದ ರೂಪದಲ್ಲಿ 36 ಯೋಜನೆಗಳ ಅನುಷ್ಠಾನಕ್ಕೆ ₹1,811 ಕೋಟಿ ಬಿಡುಗಡೆ ಮಾಡಿದೆ.ಪಂಕಜ್ ಚೌಧರಿ, ಹಣಕಾಸು ಖಾತೆ ರಾಜ್ಯ ಸಚಿವ
ಕೇಂದ್ರ ವಲಯ ಯೋಜನೆಗಳ ಅಡಿಯಲ್ಲಿ ದೆಹಲಿಗೆ 2024–25ನೇ ಸಾಲಿನಲ್ಲಿ ₹5.56 ಲಕ್ಷ ಕೋಟಿ ಬಿಡುಗಡೆಯಾಗಿದ್ದರೆ, ರಾಜ್ಯಕ್ಕೆ ಬಂದಿರುವ ಅನುದಾನ ₹14,379 ಕೋಟಿ. ಲೋಕಸಭೆಗೆ ಕೇಂದ್ರ ಹಣಕಾಸು ಸಚಿವರು ಸೋಮವಾರ ನೀಡಿರುವ ಉತ್ತರದಲ್ಲಿ ಈ ಮಾಹಿತಿ ಇದೆ. ಮಹಾರಾಷ್ಟ್ರಕ್ಕೆ ₹76,787 ಕೋಟಿ ಬಿಡುಗಡೆಯಾಗಿದೆ. ಹರಿಯಾಣಕ್ಕೆ ₹22,970 ಕೋಟಿ, ಒಡಿಶಾಕ್ಕೆ ₹17,408 ಕೋಟಿ, ತೆಲಂಗಾಣಕ್ಕೆ ₹17,795 ಕೋಟಿ ನೀಡಲಾಗಿದೆ. ಸಣ್ಣ ರಾಜ್ಯಗಳಿಗಿಂತಲೂ ರಾಜ್ಯಕ್ಕೆ ಕಡಿಮೆ ಅನುದಾನ ಬಂದಿದೆ.
ಸಚಿವಾಲಯಗಳ ಮಾರ್ಗಸೂಚಿಗಳು, ರಾಜ್ಯದಿಂದ ಅನುದಾನ ಬೇಡಿಕೆ, ಹಿಂದೆ ಬಿಡುಗಡೆಯಾದ ನಿಧಿಯ ಬಳಕೆಯ ಪ್ರಮಾಣಪತ್ರಗಳ ಸಲ್ಲಿಕೆ ಮತ್ತು ಅದಕ್ಕೆ ಅನುಗುಣವಾಗಿ ರಾಜ್ಯ ಪಾಲಿನ ಮೊತ್ತಕ್ಕೆ ಅನುಗುಣವಾಗಿ ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿ ಅನುದಾನ ಬಿಡುಗಡೆ ಮಾಡಲಾಗು
ತ್ತದೆ ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.