ಬೆಂಗಳೂರು: ‘ಹಣಕಾಸಿನ ಸಾಮರ್ಥ್ಯದ (ಆರ್ಥಿಕ ಸದೃಢತೆ) ಅಂಶವೊಂದೇ ಮಗುವಿನ ಸುಪರ್ದಿಯ ವಿಚಾರವನ್ನು ನಿರ್ಧರಿಸಲು ಆಧಾರ ಆಗುವುದಿಲ್ಲ’ ಎಂದು ಹೈಕೋರ್ಟ್ ಕೌಟುಂಬಿಕ ವ್ಯಾಜ್ಯವೊಂದರಲ್ಲಿ ಅಭಿಪ್ರಾಯಪಟ್ಟಿದೆ.
‘ಮಗಳನ್ನು ನನ್ನ ಸುಪರ್ದಿಗೆ ನೀಡಲು ಪತ್ನಿಗೆ ನಿರ್ದೇಶಿಸಬೇಕು’ ಎಂದು ಕೋರಿ ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ನ್ಯಾಯಮೂರ್ತಿ ಅನಂತ ರಾಮನಾಥ ಹೆಗ್ಡೆ ಅವರಿದ್ದ ವಿಭಾಗೀಯ ನ್ಯಾಯಪೀಠ ವಜಾಗೊಳಿಸಿದೆ.
ಮಗುವನ್ನು ತಂದೆಯ ವಶಕ್ಕೆ ನೀಡಲು ನಿರಾಕರಿಸಿರುವ ನ್ಯಾಯಪೀಠ, ‘ಮಗಳ ಭೇಟಿ ಹಕ್ಕು ಪ್ರತಿಪಾದಿಸಲು ಮತ್ತು ಅವಳಿಗೆ ಉತ್ತಮ ಶಿಕ್ಷಣದ ವ್ಯವಸ್ಥೆ ಕಲ್ಪಿಸಲು ಅವಕಾಶ ಕೋರಿ ಮೇಲ್ಮನವಿದಾರರು ಕೌಟುಂಬಿಕ ನ್ಯಾಯಾಲಯದ ಮೊರೆಹೋಗಲು ಸ್ವತಂತ್ರರಾಗಿದ್ದಾರೆ’ ಎಂದು ಇದೇ ವೇಳೆ ಸ್ಪಷ್ಟಪಡಿಸಿದೆ.
ಪ್ರಕರಣವೇನು?: ದಂಪತಿ 2008ರ ಏಪ್ರಿಲ್ 27ರಂದು ಮದುವೆಯಾಗಿದ್ದರು. 2009ರ ಸೆಪ್ಟೆಂಬರ್ 29ರಂದು ಪುತ್ರಿ ಜನಿಸಿದ್ದಳು. ಕೌಟುಂಬಿಕ ಕಲಹದ ಪರಿಣಾಮ ಪತ್ನಿ 2010ರಲ್ಲಿ ಪತಿಯನ್ನು ತೊರೆದು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು. ಅಂತೆಯೇ, ವಿಚ್ಛೇದನ ಕೋರಿ 2011ರಲ್ಲಿ ಅರ್ಜಿ ಸಲ್ಲಿಸಿದ್ದರು. ಕೌಟುಂಬಿಕ ನ್ಯಾಯಾಲಯ 2012ರಲ್ಲಿ ದಂಪತಿಯ ವಿವಾಹ ಅನೂರ್ಜಿತಗೊಳಿಸಿ, ವಿಚ್ಛೇದನ ಮಂಜೂರು ಮಾಡಿತ್ತು.
‘ಮಗಳನ್ನು ಶಾಶ್ವತವಾಗಿ ನನ್ನ ಸುಪರ್ದಿಗೆ ನೀಡಲು ಪತ್ನಿಗೆ ಆದೇಶಿಸಬೇಕು’ ಎಂದು ಕೋರಿ ಪತಿ, ‘ಪೋಷಕರು ಮತ್ತು ಪಾಲಕರ ಕಾಯ್ದೆ’-1890ರ ಅಡಿಯಲ್ಲಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಸ್ಥಳೀಯ ಕೌಟುಂಬಿಕ ಹಿರಿಯ ಸಿವಿಲ್ ನ್ಯಾಯಾಲಯ 2019ರ ಡಿಸೆಂಬರ್ 19ರಂದು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.