ಬೆಂಗಳೂರು: ದುರ್ಬಲ ಸಮುದಾಯಕ್ಕೆ ಅನುಕೂಲವಾಗುವಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯಮಶೀಲತೆ, ಆರ್ಥಿಕ ಸಬಲತೆ ಮತ್ತು ಕೌಶಲ ಅಭಿವೃದ್ಧಿಗಾಗಿ ಸಮಾಜ ಕಲ್ಯಾಣ ಇಲಾಖೆ ‘ಉನ್ನತಿ’ ಹೆಸರಿನ ಯೋಜನೆ ಪ್ರಾರಂಭಿಸಿದೆ.
ಯೋಜನೆಯಡಿ ತಂತ್ರಜ್ಞಾನ ಆವಿಷ್ಕಾರ ವಿಭಾಗದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರುಯಾವುದೇ ತಂತ್ರಜ್ಞಾನ ಆಧಾರಿತ ನವೋದ್ಯಮಗಳನ್ನು ಆರಂಭಿಸಬಹುದು. ಏಕವ್ಯಕ್ತಿ, ಸಹಭಾಗಿತ್ವ ಕಂಪನಿಗಳು ಈ ಯೋಜನೆಯನ್ನು ಆರಿಸಿಕೊಳ್ಳಬಹುದು. ಉದ್ಯಮಿಗಳಿಗೆ ₹50 ಲಕ್ಷದವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ. ಈ ಯೋಜನೆಗಾಗಿ ಸಮಾಜ ಕಲ್ಯಾಣ ಇಲಾಖೆ ಈ ವರ್ಷ ₹20 ಕೋಟಿ ಅನುದಾನ ಒದಗಿಸಲಿದೆ.
‘ತಂತ್ರಜ್ಞಾನದ ಅನ್ವೇಷಣೆಗಳು ತುಂಬಾ ಸರಳ. ಬಹಳ ಮಂದಿ ಈ ಕ್ಷೇತ್ರದಲ್ಲಿ ಮುನ್ನಡೆಯುತ್ತಿದ್ದಾರೆ. ಆದರೆ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರು ತಂತ್ರಜ್ಞಾನ ಕ್ಷೇತ್ರದಲ್ಲಿ ತೊಡಗಿಕೊಳ್ಳಲು ಅವಕಾಶ ಕಡಿಮೆ. ಉನ್ನತಿ ಯೋಜನೆ ಈ ಅಸಮತೋಲನ ತೊಡೆದುಹಾಕಲಿದೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಸಮಾಜ ಕಲ್ಯಾಣ ಸಚಿವರ ಅಧ್ಯಕ್ಷತೆಯ ಉನ್ನತ ಆಯ್ಕೆ ಸಮಿತಿಯು ಮೂರು ಹಂತದ ಮೌಲ್ಯಮಾಪನ ಮಾಡಿ ಫಲಾನುಭವಿಗಳನ್ನು ಅಂತಿಮಗೊಳಿಸಲಿದೆ. ಮಾಹಿತಿಗಾಗಿ: www.kalyanakendra.com
ಯಾರು ಅರ್ಹರು?
* ರಾಜ್ಯದ ನಾಲ್ಕು ವರ್ಷಗಳು ಮೀರದ ತಂತ್ರಜ್ಞಾನ ಕಂಪನಿಗಳು ಅರ್ಜಿ ಸಲ್ಲಿಸಬಹುದು.
* ಉದ್ಯಮಗಳಲ್ಲಿ ಕೆಲಸ ಮಾಡುವ ಕನಿಷ್ಠ ಶೇ 50ರಷ್ಟು ಉದ್ಯೋಗಿಗಳು ರಾಜ್ಯದವರಾಗಿರಬೇಕು.
* ಬಹು ಮುಖ್ಯವಾಗಿ ನವೋದ್ಯಮಗಳನ್ನು ಆರಂಭಿಸುವ ಘಟಕವು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಪ್ರಧಾನ ಹೂಡಿಕೆದಾರರ ಸಹಭಾಗಿತ್ವವನ್ನು ಹೊಂದಿರಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.