ADVERTISEMENT

ಕನ್ನಡ ವಿ.ವಿ: ಸರ್ಕಾರಕ್ಕೆ ಗಡುವು ನೀಡಿದ ಕರವೇ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 21:18 IST
Last Updated 28 ಡಿಸೆಂಬರ್ 2020, 21:18 IST

ಬೆಂಗಳೂರು: ಅನುದಾನದ ಕೊರತೆ ಸೇರಿದಂತೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕೆಂಬ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಐದು ದಿನಗಳ ಗುಡುವು ನೀಡಿದೆ.

‘ಕನ್ನಡ ವಿ.ವಿ ಉಳಿಸಿ’ ಅಭಿಯಾನ ಆರನೇ ದಿನವೂ ಮುಂದುವರಿದಿದೆ. ‘ಕನ್ನಡಿಗರ ಅಸ್ಮಿತೆಯ ಪ್ರತೀಕವಾಗಿರುವ ವಿಶ್ವವಿದ್ಯಾಲಯ ಉಳಿಸಬೇಕು ಎಂದು ಚಳವಳಿಗೆ ಸರ್ಕಾರ ಕಿವಿಗೊಡುತ್ತಿಲ್ಲ. ಸರ್ಕಾರದ ಕಿವುಡುತನ ಸಹಿಸಲು ಆಗುವುದಿಲ್ಲ. ತನ್ನದೇ ಆದ ವಿಧಾನದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಕರವೇ ರಾಜ್ಯ ಘಟಕದ ಅಧ್ಯಕ್ಷ ಟಿ.ಎ.ನಾರಾಯಣಗೌಡ ಎಚ್ಚರಿಸಿದ್ದಾರೆ.

‘ಅನುದಾನ ಬಿಡುಗಡೆ ಮಾಡುವ ಜತೆಗೆ ಅದರ ಪ್ರತ್ಯೇಕ ಅಸ್ತಿತ್ವವನ್ನು ಹಾಗೇ ಉಳಿಸಿಕೊಳ್ಳುವ ಘೋಷಣೆಯನ್ನು ಸರ್ಕಾರ ಮಾಡಬೇಕು. ಪದೇ ಪದೇ ಚಳವಳಿ ಮಾಡಬೇಡಿ, ಮಾತುಕತೆಗೆ ಬನ್ನಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳುತ್ತಾರೆ. ಇನ್ನೊಂದೆಡೆ ಅನುದಾನ ಬಿಡುಗಡೆ ಮಾಡುವುದಾಗಿ ಉನ್ನತ ಶಿಕ್ಷಣ ಸಚಿವರು ನೀಡಿದ್ದ ಭರವಸೆ ಹುಸಿಯಾಗಿದೆ. ಸಾಮಾನ್ಯ ಜನರ ಕೂಗಿಗೆ ಬೆಲೆ ಕೊಡದಿದ್ದರೆ ಪರಿಣಾಮವನ್ನು ಸರ್ಕಾರವೇ ಎದುರಿಸಬೇಕಾಗುತ್ತದೆ’ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಸಾಮಾಜಿಕ‌ ಜಾಲತಾಣಗಳಲ್ಲಿ ‘ಭಿತ್ತಿಪತ್ರ ಚಳವಳಿ’ಯನ್ನು ಕರವೇ ನಡೆಸುತ್ತಿದೆ. ನಾಡಿನ ಸಾಹಿತಿಗಳು, ಮಠಾಧೀಶರು, ಚಿಂತಕರು, ಧರ್ಮಗುರುಗಳು ಈ ಚಳವಳಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಲಕ್ಷಾಂತರ ಜನರ ಗಮನ ಸೆಳೆದಿದೆ. ಇಷ್ಟಾದರೂ ಸರ್ಕಾರ ಬೇಜವಾಬ್ದಾರಿ ಮತ್ತು ಉದಾಸೀನ‌ ಪ್ರವೃತ್ತಿಯನ್ನು ಮುಂದುವರಿಸಿದೆ. ಈ ಸಮಯದಲ್ಲಿ‌ ತೀವ್ರ ಸ್ವರೂಪದ‌ ಚಳವಳಿ ನಡೆಸದೇ ನಮಗೆ ಬೇರೆ ದಾರಿ‌ ಉಳಿದಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.