ADVERTISEMENT

ದೆಹಲಿ: ಬೆಂಗಳೂರು ಪೊಲೀಸರ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2022, 19:59 IST
Last Updated 29 ಡಿಸೆಂಬರ್ 2022, 19:59 IST
   

ನವದೆಹಲಿ: ವ್ಯಾಪಾರಿಯೊಬ್ಬರಿಂದ ಹಣ ವಸೂಲಿ ಮಾಡಿದ ಆರೋಪದಲ್ಲಿ ಬೆಂಗಳೂರಿನ ವಿವಿ ಪುರ ಠಾಣೆಯ ಪಿಎಸ್‌ಐ ಸೇರಿದಂತೆ ಮೂವರು ಪೊಲೀಸರ ವಿರುದ್ಧ ನವದೆಹಲಿಯ ಸೀಮಾಪುರಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಪ್ರಕರಣವೊಂದಕ್ಕೆ ಸಂಬಂಧಿಸಿ ವ್ಯಾಪಾರಿ ಪಂಕಜ್‌ ಜೈನ್‌ ಎಂಬುವರಿಗೆ ನೋಟಿಸ್‌ ನೀಡಲು ಪೊಲೀಸರು ಬಂದಿದ್ದರು. ಈ ವೇಳೆ, ಅವರು ವ್ಯಾಪಾರಿಯಿಂದ ₹25 ಲಕ್ಷ ಹಣ ವಸೂಲಿ ಮಾಡಿದ್ದರು ಎಂದು ಆರೋಪಿಸಲಾಗಿದೆ.

‘ನಾನು ಜಿಲ್‌ಮಿಲ್‌ ಕೈಗಾರಿಕಾ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾ ತಯಾರಿಸುವ ಫ್ಯಾಕ್ಟರಿ ಹೊಂದಿದ್ದೇನೆ. ಇದೇ 23ರಂದು ಪೊಲೀಸರಾದ ಸತೀಶ್‌, ಮುತ್ತುರಾಜ್‌ ಹಾಗೂ ಬಸವರಾಜ ಪಾಟೀಲ ಎಂಬವರು ನನ್ನ ಬಳಿಗೆ ಬಂದು ಬೆದರಿಕೆ ಹಾಕಿದರು. ನಿಮ್ಮ ವಿರುದ್ಧ ಆರೆಸ್ಟ್‌ ವಾರೆಂಟ್‌ ಇದೆ. ನಾವು ಕೇಳಿದಷ್ಟು ಹಣ ನೀಡಿದರೆ ತೊಂದರೆ ಕೊಡುವುದಿಲ್ಲ. ಇಲ್ಲದಿದ್ದರೆ ನಿಮ್ಮ ಫ್ಯಾಕ್ಟರಿ ಬಂದ್‌ ಮಾಡಿಸುತ್ತೇವೆ ಎಂದು ಬೆದರಿಕೆ ಹಾಕಿದರು. ಹೀಗಾಗಿ, ₹7 ಲಕ್ಷ ನಗದು ಹಾಗೂ ₹13 ಲಕ್ಷವನ್ನು ಚೆಕ್‌ ಮೂಲಕ ಮಧ್ಯವರ್ತಿ ಮೂಲಕ
ನೀಡುವಂತೆ ಒತ್ತಡ ಹೇರಿದರು. ಸುಳ್ಳು ಆರೋಪ ಹೊರಿಸಿ ಕಿರುಕುಳ ನೀಡಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಪಂಕಜ್‌ ಜೈನ್‌ ದೂರಿನಲ್ಲಿ ತಿಳಿಸಿದ್ದಾರೆ. ಸೀಮಾಪುರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.