ADVERTISEMENT

ವಾಹಿನಿ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2018, 20:11 IST
Last Updated 7 ಅಕ್ಟೋಬರ್ 2018, 20:11 IST

ಬೆಂಗಳೂರು: ‘ವಿಧಾನ ಪರಿಷತ್ ಸದಸ್ಯ ಎಚ್‌.ಎಂ.ರಮೇಶ್ ಗೌಡ ಅವರ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡಿದ ಟಿವಿ–9 ವಾಹಿನಿಯ ಆಡಳಿತ ಮಂಡಳಿ, ಆ ಸುದ್ದಿ ಪ್ರಸಾರ ನಿಲ್ಲಿಸಲು ₹50 ಲಕ್ಷಕ್ಕೆ ಬೇಡಿಕೆ ಇಟ್ಟಿದೆ’ ಎಂದು ರಮೇಶ್ ಗೌಡ ಅವರ ಸಹೋದರ ರಾಜೇಶ್, ಮಹಾಲಕ್ಷ್ಮಿ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ.

ವಾಹಿನಿಯ ಸಿಬ್ಬಂದಿ ಎನ್ನಲಾದ ವ್ಯಕ್ತಿಯೊಬ್ಬ ತಮ್ಮ ಮೊಬೈಲ್‌ಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆಡಿಯೊ ಸಮೇತ ರಾಜೇಶ್‌ ದೂರು ಕೊಟ್ಟಿದ್ದಾರೆ. ಅದರನ್ವಯ ವಾಹಿನಿಯ 12 ಮಂದಿ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

‘ಜೆಡಿಎಸ್ ಪಕ್ಷದ ಹಾಲಿ ವಿಧಾನ ಪರಿಷತ್‌ ಸದಸ್ಯರಾದ ನನ್ನ ಅಣ್ಣನ ಕುರಿತು ಮಾನಹಾನಿಸುದ್ದಿ ಪ್ರಸಾರ ಮಾಡುವ ಬಗ್ಗೆ ಮಾಹಿತಿ ಬಂದಿತ್ತು. ನಾನು ಹಾಗೂ ನನ್ನ ಮತ್ತೊಬ್ಬ ಅಣ್ಣ ಅಂಬರೀಶ್, ವಾಹಿನಿಯ ಕಚೇರಿಗೆ ಶನಿವಾರ ರಾತ್ರಿ (ಅಕ್ಟೋಬರ್ 6) ಹೋಗಿದ್ದೆವು. ಅಲ್ಲಿದ್ದ ಸಿಬ್ಬಂದಿ, ತಮ್ಮ ಮುಖ್ಯಸ್ಥರಿಗೆ ಕರೆ ಮಾಡಿಕೊಟ್ಟರು. ‘ರಮೇಶ್ ಗೌಡ ವಿರುದ್ಧ ಕ್ಯಾಂಪೇನ್ ಮಾಡುತ್ತಿದ್ದೇವೆ. ಅದನ್ನು ನಿಲ್ಲಿಸಲು ನಾಳೆ ಬೆಳಿಗ್ಗೆ ₹50 ಲಕ್ಷ ತಂದು ಕೊಡಬೇಕು’ ಎಂದು ಆ ಮುಖ್ಯಸ್ಥ ಸಹ ಬೇಡಿಕೆ ಇಟ್ಟಿದ್ದ’ ಎಂದು ದೂರಿನಲ್ಲಿ ರಾಜೇಶ್‌ ತಿಳಿಸಿದ್ದಾರೆ.

ADVERTISEMENT

‘ಭಾನುವಾರ ಮಧ್ಯಾಹ್ನವೂ ವಾಹಿನಿಯ ಕಚೇರಿಯಿಂದ ನನ್ನ ಮೊಬೈಲ್‌ಗೆ ಕರೆ ಮಾಡಿದ್ದ ವ್ಯಕ್ತಿ, ‘ಹಣ ತಂದುಕೊಡಿ. ಸುದ್ದಿ ಪ್ರಸಾರ ನಿಲ್ಲಿಸುತ್ತೇವೆ’ ಎಂದು ಪುನಃ ಹೇಳಿದ್ದ’ ಎಂದು ದೂರಿನಲ್ಲಿ ಬರೆದಿದ್ದಾರೆ.

ದೂರಿನ ಬಗ್ಗೆ ಪ್ರತಿಕ್ರಿಯೆ ಪಡೆಯಲು ವಾಹಿನಿಯ ಮುಖ್ಯಸ್ಥರು ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.