ADVERTISEMENT

₹ 2.84 ಕೋಟಿ ವಂಚನೆ ಆರೋಪ: ಕಟ್ಟಾ ಸುಬ್ರಮಣ್ಯ ನಾಯ್ಡು ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 11:26 IST
Last Updated 12 ಅಕ್ಟೋಬರ್ 2021, 11:26 IST
   

ಬೆಂಗಳೂರು: ನಿವೇಶನ ಹಾಗೂ ಫ್ಲ್ಯಾಟ್‌ ಖರೀದಿ ವಿಚಾರವಾಗಿ ₹ 2.84 ಕೋಟಿ ವ್ಯವಹಾರ ನಡೆಸಿ ವಂಚಿಸಿರುವ ಆರೋಪದಡಿ ಬಿಜೆಪಿ ಮುಖಂಡ ಕಟ್ಟಾ ಸುಬ್ರಮಣ್ಯ ನಾಯ್ಡು ಅವರ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಇಂಡ್‌ ಸಿಂಗ್ ಡೆವಲಪರ್ಸ್ ಕಂಪನಿ ನಿರ್ದೇಶಕ ಎಂ. ಕೃಷ್ಣ ಎಂಬುವರ ಖಾಸಗಿ ಮೊಕದ್ದಮೆಯ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಆರೋಪಿ ಕಟ್ಟಾ ಸುಬ್ರಮಣ್ಯ ನಾಯ್ಡು ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಸೂಚಿಸಿತ್ತು. ಅದರನ್ವಯ ಎಂ. ಕೃಷ್ಣ ಅವರಿಂದ ದೂರು ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ’ ಎಂದು ಪೊಲೀಸರು ಹೇಳಿದರು.

‘ಕಟ್ಟಾ ಸುಬ್ರಮಣ್ಯ ನಾಯ್ಡು ಹಾಗೂ ಎಂ. ಕೃಷ್ಣ ಹಲವು ವರ್ಷಗಳಿಂದ ಪರಿಚಿತರು. ಅವರ ನಡುವೆ ಹಣಕಾಸಿನ ವ್ಯವಹಾರವೂ ಇತ್ತು. ನಿವೇಶನ ಹಾಗೂ ಫ್ಲ್ಯಾಟ್‌ಗಳನ್ನು ಖರೀದಿ ಮಾಡುವ ಸಲುವಾಗಿ ಕಟ್ಟಾ ಸುಬ್ರಮಣ್ಯ ಅವರು ಕೃಷ್ಣ ಅವರಿಂದ ಹಂತ ಹಂತವಾಗಿ ₹ 2.84 ಕೋಟಿ ಪಡೆದಿದ್ದರು. ಕೆಲ ದಿನ ಬಿಟ್ಟು ದುಪ್ಪಟ್ಟು ಲಾಭ ನೀಡುವುದಾಗಿಯೂ ಹೇಳಿದ್ದರು.’

ADVERTISEMENT

‘ಹಲವು ದಿನ ಕಳೆದರೂ ಹಣ ವಾಪಸು ಕೊಟ್ಟಿರಲಿಲ್ಲ. ಈ ಬಗ್ಗೆ ಕೃಷ್ಣ ಅವರು ವಿಚಾರಿಸಿದಾಗ ₹ 2 ಲಕ್ಷವನ್ನು ಮಾತ್ರ 2018ರಲ್ಲಿ ಹಿಂದಿರುಗಿಸಿದ್ದರು. ಉಳಿದ ಹಣ ನೀಡಲು ಸುಬ್ರಮಣ್ಯ ಹಿಂದೇಟು ಹಾಕಿದ್ದರು. ಈ ಸಂಗತಿ ದೂರಿನಲ್ಲಿದೆ’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.