ಹುಬ್ಬಳ್ಳಿ: ‘ನ್ಯಾಯಾಲಯಗಳಿಗೆ ಮೂಲ ಸೌಕರ್ಯ ಕಲ್ಪಿಸುವ ವಿಷಯ ಬಂದಾಗ ಸರ್ಕಾರ ಹಣಕಾಸಿನ ಕೊರತೆ ಇದೆ ಎಂದು ಹೇಳಬಾರದು’ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹೇಳಿದರು.
ಹುಬ್ಬಳ್ಳಿ ನೂತನ ನ್ಯಾಯಾಲಯ ಸಂಕೀರ್ಣವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು, ‘ಅಗತ್ಯ ಮೂಲ ಸೌಕರ್ಯಗಳನ್ನು ನ್ಯಾಯಾಲಯಗಳಿಗೆ ಒದಗಿಸಬೇಕು, ಆ ಪ್ರಕ್ರಿಯೆ ಮುಂದುವರೆಯುತ್ತಿರಬೇಕು. ಲಭ್ಯ ಇರುವ ನೂತನ ತಂತ್ರಜ್ಞಾವನ್ನು ಸಹ ಅಳವಡಿಸಬೇಕು, ಈ ವಿಷಯದಲ್ಲಿ ಹಿಂದೆ ಬೀಳಬಾರದು. ಒಟ್ಟಾರೆ ನ್ಯಾಯಾಂಗದ ಪ್ರಸ್ತಾವನೆಗಳಿಗೆ ಕಾರ್ಯಾಂಗ ಇಲ್ಲ ಎಂದು ಹೇಳಬಾರದು’ ಎಂದು ತಿಳಿಸಿದರು.
‘ಕಟ್ಟಡ ಅಥವಾ ಬೇರೆ ಯಾವುದೇ ಸೌಲಭ್ಯಗಳಿರಲಿ, ಅವುಗಳು ಗುಣಮಟ್ಟದಿಂದ ಕೂಡಿರಬೇಕೇ ವಿನಃ ಸಾಂಕೇತಿಕವಾಗಿರಬಾರದು. ನ್ಯಾಯಾಲಯಕ್ಕೆ ಬರುವ ವಕೀಲರು, ಸಿಬ್ಬಂದಿ, ಕಕ್ಷಿದಾರರಿಗೆ ತಾವು ಪವಿತ್ರ ಸ್ಥಳದಲ್ಲಿದ್ದೇವೆ ಎಂಬ ಭಾವನೆ ಬರಬೇಕು’ ಎಂದು ಅವರು ಹೇಳಿದರು.
ಅತಿ ದೊಡ್ಡ ತಾಲ್ಲೂಕು ನ್ಯಾಯಾಲಯ: ₹122 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಐದು ಮಹಡಿ ಇರುವ ತಾಲ್ಲೂಕು ನ್ಯಾಯಾಲಯ ಸಂಕೀರ್ಣ ಇದಾಗಿದೆ. ದೇಶದಲ್ಲಿಯೇ ಇದು ಅತ್ಯಂತ ದೊಡ್ಡ ತಾಲ್ಲೂಕು ನ್ಯಾಯಾಲಯಎನ್ನಲಾಗಿದೆ. ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆಯೂ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.