ADVERTISEMENT

ಹಿಂದುಳಿದವರ ಏಳ್ಗೆಗೆ 3 ‘ಇ’ ಮಂತ್ರ: ಬೊಮ್ಮಾಯಿ

ಶಿಕ್ಷಣ, ಉದ್ಯೋಗ, ಉದ್ಯಮದಲ್ಲಿ ಅವಕಾಶ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2021, 20:00 IST
Last Updated 20 ಆಗಸ್ಟ್ 2021, 20:00 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ಸರ್ಕಾರಿ ವಲಯದಲ್ಲಿ ಅವಕಾಶಗಳು ಕಡಿಮೆ ಆಗುತ್ತಿರುವುದರಿಂದ ಪರಿಶಿಷ್ಟರು, ಹಿಂದುಳಿದ ಸಮುದಾಯಗಳಿಗೆ ಸೇರಿದ ಬಿಪಿಎಲ್‌ ವರ್ಗದವರಿಗೆ ಶಿಕ್ಷಣ, ಉದ್ಯೋಗ ಮತ್ತು ಉದ್ಯಮದಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವುದಕ್ಕೆ ಪೂರಕವಾಗಿ ಹೊಸ ಯೋಜನೆಗಳನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಶುಕ್ರವಾರ ದೇವರಾಜ ಅರಸು ಪ್ರಶಸ್ತಿ ಪ್ರದಾನ ಮಾಡಿದ ಅವರು, ‘ಮೂರು ‘ಇ’ಗಳು ಅಂದರೆ ಎಜುಕೇಷನ್‌, ಎಂಪ್ಲಾಯ್‌ಮೆಂಟ್‌ ಮತ್ತು ಎಂಟರ್‌ಪ್ರೆನ್ನರ್‌ಶಿಪ್‌ಗೆ ಸರ್ಕಾರ ಒತ್ತು ಕೊಡಲಿದೆ’ ಎಂದರು.

ಪರಿಶಿಷ್ಟ ಜಾತಿ, ವರ್ಗಗಳು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರಿಗೆ ನಿರ್ಮಿಸಿರುವ ವಸತಿ ಶಾಲೆಗಳನ್ನು ಗುಣಾತ್ಮಕವಾಗಿ ಉನ್ನತೀಕರಿಸಲಾಗುವುದು. ಆಧುನಿಕ ಉದ್ಯಮ ಮತ್ತು ಉದ್ಯೋಗಗಳಿಗೆ ತಕ್ಕಂತೆ ಶಿಕ್ಷಣದ ವ್ಯವಸ್ಥೆ ಮಾಡಲಾಗುವುದು. ಅಂತರರಾಷ್ಟ್ರೀಯ ಗುಣಮಟ್ಟದ ಉನ್ನತ ಶಿಕ್ಷಣ ನೀಡಲು ಉದ್ದೇಶಿಸಲಾಗಿದೆ ಎಂದರು.

ADVERTISEMENT

ಸಿಇಟಿ ಮತ್ತು ನೀಟ್‌ನಂತಹ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ಅನುಕೂಲವಾಗುವಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗುವುದು. ಇದಕ್ಕಾಗಿ ಗುಣಮಟ್ಟದ ಶಿಕ್ಷಣ ನೀತಿಯನ್ನು ರೂಪಿಸಲಾಗುವುದು ಎಂದರು.

ಅಲೆಮಾರಿ ಜನಾಂಗಕ್ಕೆ 3 ವಸತಿ ಶಾಲೆ: ಅಲೆಮಾರಿ ಜನಾಂಗದ ಮಕ್ಕಳಿಗೆ ಶಿಕ್ಷಣನೀಡಲು ಈ ವರ್ಷ ಮೂರು ಅಲೆಮಾರಿ ವಸತಿ ಶಾಲೆಗಳನ್ನು ಆರಂಭಿಸಲಾಗುವುದು. ಈಗಾಗಲೇ ನಾಲ್ಕು ವಸತಿ ಶಾಲೆಗಳಿವೆ. ಈ ಶಾಲೆಗಳಲ್ಲಿ ಎರಡು ಶಾಲೆಗಳಿಗೆ ಸ್ವಂತ ಕಟ್ಟಡಗಳಿವೆ. ಇನ್ನೆರಡು ಶಾಲೆಗಳಿಗೆ ಕಟ್ಟಡ ಹೊಂದಲು ತಲಾ ₹ 6 ಕೋಟಿ ನೀಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ಸಮಾಜ ಕಲ್ಯಾಣ ಸಚಿವ ಕೋಟಶ್ರೀನಿವಾಸಪೂಜಾರಿ ಅವರು, ಭೂಸುಧಾರಣೆಗಾಗಿ ಕ್ರಾಂತಿಕಾರಕ ನಿರ್ಧಾರ
ಗಳನ್ನು ಅರಸು ತೆಗೆದುಕೊಂಡರು. ಸಮಾಜ ಕಟ್ಟಕಡೆಯ ವ್ಯಕ್ತಿಯನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದರು ಎಂದರು.

ಪ್ರಶಸ್ತಿ ಪ್ರದಾನ: ಬಸವಪ್ರಭು ಲಖಮಗೌಡ ಪಾಟೀಲ, ಕೆ.ಭಾಸ್ಕರ್ ದಾಸ್ ಎಕ್ಕಾರು ಮತ್ತು ಎಸ್‌.ಜಿ.ಸುಶೀಲಮ್ಮ ಅವರಿಗೆ ‘ದೇವರಾಜ ಅರಸು ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಆಯ್ಕೆ ಸಮಿತಿ ಅಧ್ಯಕ್ಷ ಪ್ರೊ.ದೊಡ್ಡರಂಗೇಗೌಡ ಮಾತನಾಡಿದರು.

ಅರಸು ಚಿಂತನೆಗಳು ಇಂದಿಗೂ ಪ್ರಸ್ತುತ:ಗುಲಾಮಗಿರಿಯಿಂದ ಹೊರ ಬರಲು ಹೊಸ ಆಯಾಮ ಕೊಟ್ಟ ಧೀಮಂತ ನಾಯಕ ದೇವರಾಜ ಅರಸುಚಿಂತನೆಗಳು ಇಂದಿಗೂ ಪ್ರಸ್ತುತ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.