ADVERTISEMENT

ಸುಂಟಿಕೊಪ್ಪ ಗ್ರಾ.ಪಂ.ವತಿಯಿಂದ ಊಟ, ದಿನಸಿ ವಿತರಣೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 14:00 IST
Last Updated 28 ಮಾರ್ಚ್ 2020, 14:00 IST
ಸುಂಟಿಕೊಪ್ಪದ ಮಾರುಕಟ್ಟೆಯಲ್ಲಿ ಆಶ್ರಮ ಪಡೆದಿರುವವರಿಗೆ ಗ್ರಾಮ ಪಂಚಾಯಿತಿ ವತಿಯಿಂದ ಮೂರು ಹೊತ್ತಿನ ಊಟೋಪಾಚರ ವ್ಯವಸ್ಥೆ ಮಾಡಲಾಯಿತು.
ಸುಂಟಿಕೊಪ್ಪದ ಮಾರುಕಟ್ಟೆಯಲ್ಲಿ ಆಶ್ರಮ ಪಡೆದಿರುವವರಿಗೆ ಗ್ರಾಮ ಪಂಚಾಯಿತಿ ವತಿಯಿಂದ ಮೂರು ಹೊತ್ತಿನ ಊಟೋಪಾಚರ ವ್ಯವಸ್ಥೆ ಮಾಡಲಾಯಿತು.   

ಸುಂಟಿಕೊಪ್ಪ: ಇಲ್ಲಿನ ಸಂತೆ ಮಾರುಕಟ್ಟೆಯಲ್ಲಿ ನಿರಾಶ್ರಿತರಾಗಿ ಜೀವನ ಸಾಗಿಸುತ್ತಿರುವ ಸುಮಾರು 10 ಮಂದಿಗೆ ಗ್ರಾಮ ಪಂಚಾಯಿತಿ ಪಿಡಿಒ ವೇಣುಗೋಪಾಲ್, ಸದಸ್ಯೆ ನಾಗರತ್ನ, ಗ್ರಾ.ಪಂ. ಸಿಬ್ಬಂದಿ ಸಂಧ್ಯಾ, ಪೌರ ಕಾರ್ಮಿಕರು, ಸಿಬ್ಬಂದಿಗಳು ಹಾಗೂ ಹಿರಿಯರಾದ ರಮೇಶ್ ಶೇಟ್ ಅವರು ಕಳೆದ ಮೂರು ದಿನಗಳಿಂದ ಮೂರು ಹೊತ್ತಿನ ಊಟೋಪಾಚಾರದ ವ್ಯವಸ್ಥೆಯನ್ನು ಮಾಡಿದ್ದಾರೆ.

ಕೊರೊನಾ ಭೀತಿಯ ಮುಂಜಾಗ್ರತಾ ಕ್ರಮವಾಗಿ ಲಾಕ್ ಡೌನ್ ಆದ ಕಾರಣ ಇವರಿಗೆ ಊಟ, ತಿಂಡಿ ಇಲ್ಲದೇ ಕಂಗಲಾಗಿದ್ದರು. ಇದನ್ನರಿತು ಅವರಿಗೆ ಊಟ, ತಿಂಡಿಯ ವ್ಯವಸ್ಥೆಯನ್ನು ಮಾಡಲಾಗಿದೆ.

ಆಶ್ರಮಕ್ಕೆ ದಿನಸಿ, ತರಕಾರಿ

ADVERTISEMENT

ಸಮೀಪದ ಗದ್ದೆಹಳ್ಳದಲ್ಲಿರುವ ವಿಕಾಸ ಜನಸೇವಾ ಟ್ರಸ್ಟ್ ಜೀವನಾಧಾರಿ ಆಶ್ರಮದಲ್ಲಿರುವ ನಿರ್ಗತಿಕರಿಗೆ, ಅನಾಥರಿಗೆ ಇಲ್ಲಿನ ಗ್ರಾಮ ಪಂಚಾಯಿತಿಯ ನೇತೃತ್ವದಲ್ಲಿ ದಾನಿಗಳು ನೀಡಿದ ದಿನಸಿ, ತರಕಾರಿಗಳನ್ನು ನೀಡಲಾಯಿತು.

ಗ್ರಾಮ ಪಂಚಾಯಿತಿಯ ಪಿಡಿಒ ವೇಣುಗೋಪಾಲ್ ಅವರು ಆಶ್ರಮಕ್ಕೆ ಬೇಕಾದ ದಿನಬಳಕೆಯ ವಸ್ತುಗಳನ್ನು, ತರಕಾರಿ ವ್ಯಾಪಾರಿಗಳಿಂದ ತರಕಾರಿಗಳನ್ನು, ಬೇಕರಿ ತಿಂಡಿಗಳನ್ನು ಪಡೆದು ಅದನ್ನು ಆಶ್ರಮದ ಅಧ್ಯಕ್ಷ ರಮೇಶ್ ಅವರಿಗೆ ನೀಡಲಾಯಿತು.

ಇದೇ ಸಂದರ್ಭ ಮಾತನಾಡಿದ ಪಿಡಿಒ ವೇಣುಗೋಪಾಲ್, ಕೊರೊನಾ ಸೋಂಕನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರಿಂದ ಬಡವರಿಗೆ ಊಟಕ್ಕೆ ತೊಂದರೆಯಾಗುತ್ತಿದ್ದು, ಇದನ್ನು ಮನಗಂಡು ದಾನಿಗಳ ಸಹಾಯವನ್ನು ಪಡೆದು ಈ ವ್ಯವಸ್ಥೆಯನ್ನು ಮಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ದಾನಿಗಳು ಮುಂದೆ ಬಡವರ ಹೊಟ್ಟೆ ಖಾಲಿಯಾಗದಂತೆ ಸಹಾಯ ಮಾಡಬೇಕು ಎಂದು ಮನವಿ ಮಾಡಿಕೊಂಡರು.

ಎಎಸ್‌ಐ ಶಿವಪ್ಪ ಮಾತನಾಡಿ, ಸಾರ್ವಜನಿಕರು ಸೋಂಕು ನಿವಾರಣೆಗೆ ಎಚ್ಚರ ವಹಿಸಿ, ಗ್ರಾಮೀಣ ಜನರಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು.ಅಲ್ಲದೇ ಅನಾವಶ್ಯಕವಾಗಿ ಯಾರೂ ಕೂಡ ಪಟ್ಟಣದಲ್ಲಿ ಸಂಚರಿಸದೆ ಮನೆಯಲ್ಲಿಯೇ ಇದ್ದು ನಮ್ಮೊಂದಿಗೆ ಸಹಕರಿಸಬೇಕು ಎಂದರು.

ಆಶ್ರಮದ ಅಧ್ಯಕ್ಷ ರಮೇಶ್, ಗ್ರಾಮ ಪಂಚಾಯಿತಿ ಸಿಬ್ಬಂದಿ ಪುನಿತ್ ಕುಮಾರ್, ಶ್ರೀನಿವಾಸ್, ಪೌರಕಾರ್ಮಿಕರಾದ ಬಾಲು, ರಂಗಸ್ವಾಮಿ, ಚಾಮುಂಡೇಶ್ವರಿ ಸ್ಟೋರ್ ಮಾಲೀಕ ಅನಿಲ್, ತರಕಾರಿ ವ್ಯಾಪಾರಿಗಳಾದ ರೆಹಮತ್, ಶೇರ್ ಖಾನ್, ಮಜೀದ್, ಶಿವಕುಮಾರ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.