ADVERTISEMENT

ಆಹಾರೋತ್ಪಾದನೆ: ಭವಿಷ್ಯದ ಸವಾಲು: ಘಟಿಕೋತ್ಸವದಲ್ಲಿ ಪರೋಡ

ವೃತ್ತಿಯಾಗಿ ಕೃಷಿ: ಯುವಜನರಿಗೆ ಉತ್ತೇಜನ ಅಗತ್ಯ –-ಡಾ.ಆರ್.ಎಸ್‌.ಪರೋಡ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2022, 19:55 IST
Last Updated 9 ಸೆಪ್ಟೆಂಬರ್ 2022, 19:55 IST
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 56ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ಚಿನ್ನದ ಪದಕ ಪ್ರದಾನ ಮಾಡಿದರು. ಸಚಿವ ಬಿ.ಸಿ.ಪಾಟೀಲ್‌, ಡಾ.ಆರ್‌.ಎಸ್‌.ಪರೋಡ ಹಾಗೂ ಡಾ.ಎಸ್‌.ರಾಜೇಂದ್ರಪ್ರಸಾದ್ ಇದ್ದಾರೆ
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 56ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ಚಿನ್ನದ ಪದಕ ಪ್ರದಾನ ಮಾಡಿದರು. ಸಚಿವ ಬಿ.ಸಿ.ಪಾಟೀಲ್‌, ಡಾ.ಆರ್‌.ಎಸ್‌.ಪರೋಡ ಹಾಗೂ ಡಾ.ಎಸ್‌.ರಾಜೇಂದ್ರಪ್ರಸಾದ್ ಇದ್ದಾರೆ   

ಬೆಂಗಳೂರು: ‘ಗ್ರಾಮ, ಬ್ಲಾಕ್‌ಮಟ್ಟದಲ್ಲಿ ಅಗ್ರಿ ಕ್ಲಿನಿಕ್‌ಗಳನ್ನು ಸ್ಥಾಪಿಸುವುದು ಅಗತ್ಯ’ ಎಂದು ನವದೆಹಲಿಯ ಕೃಷಿ ವಿಜ್ಞಾನ ಪ್ರಗತಿ ಟ್ರಸ್ಟ್‌ ಅಧ್ಯಕ್ಷ ಡಾ.ಆರ್‌.ಎಸ್‌.ಪರೋಡಶುಕ್ರವಾರ ಹೇಳಿದರು.

ಇಲ್ಲಿನ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ (ಜಿಕೆವಿಕೆ) 56ನೇ ಘಟಿಕೋತ್ಸವದಲ್ಲಿ ಅವರು,‘ಕೃಷಿ ಪದವೀಧರರಿಗೆ ಪರಿಕರ, ಯಂತ್ರೋಪಕರಣ, ಹಾಗೂ ಸಲಕರಣೆ ಮಾರಾಟಕ್ಕೆ ವಿಶೇಷ ಪರವಾನಗಿ ನೀಡಬೇಕು’ ಎಂದುಆಗ್ರಹಪಡಿಸಿದರು.

‘ಜಗತ್ತಿನ ಜನಸಂಖ್ಯೆಯು 2050ರ ವೇಳೆಗೆ 900 ಕೋಟಿ ತಲುಪುವ ಅಂದಾಜಿದೆ. ಆಗ ಶೇ 70ರಷ್ಟು ಹೆಚ್ಚಿನ ಆಹಾರದ ಅವಶ್ಯವಾಗಲಿದೆ. 2030ರ ವೇಳೆಗೆ ಭಾರತದ ಜನಸಂಖ್ಯೆಗೆ ಆಹಾರ ಒದಗಿಸುವ ದೊಡ್ಡ ಸವಾಲು ಎದುರಾಗಲಿದೆ. 2027ರ ವೇಳೆಗೆ ದೇಶ ಜನಸಂಖ್ಯೆಯಲ್ಲಿ ಮೊದಲ ಸ್ಥಾನಕ್ಕೇರುವ ಸಂಭವವಿದೆ’ ಎಂದು ಹೇಳಿದರು.

ADVERTISEMENT

ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು, ಭಾರತೀಯ ಕೃಷಿಯು ಇನ್ನೂ ಮಳೆ ಆಧಾರಿತವಾಗಿದೆ. ಒಟ್ಟು ಬೆಳೆ ಪ್ರದೇಶದ 3ನೇ ಎರಡರಷ್ಟು ಪ್ರದೇಶದಲ್ಲಿ ಮಳೆ-ಆಧಾರಿತ ಕೃಷಿ
ಯನ್ನು ಮಾಡಲಾಗುತ್ತದೆ. ಇಸ್ರೇಲ್‌ನಲ್ಲಿ ವಾರ್ಷಿಕ ಕೇವಲ 10 ಸೆಂ.ಮೀ. ಮಳೆಯಾದ ಪ್ರದೇಶದಲ್ಲೂ ನೀರಾವರಿ ವ್ಯವಸ್ಥೆಯಿಂದ ಉತ್ತಮ ಇಳುವರಿ ಪಡೆಯಲಾಗುತ್ತಿದೆ ಎಂದರು.

ಇಸ್ರೇಲ್‌ನ ಹವಾಮಾನ ಕೃಷಿಗೆ ಸೂಕ್ತವಾಗಿಲ್ಲ. ಆದರೆ, ಕೃಷಿ ತಂತ್ರಜ್ಞಾನ
ಗಳಲ್ಲಿ ವಿಶ್ವ ನಾಯಕ. ಹನಿ ನೀರಾವರಿ ತಂತ್ರಜ್ಞಾನವನ್ನು ಬಳಸಿಕೊಂಡು ಇಸ್ರೇಲ್ ಕೃಷಿಯ ಸ್ಮಾರ್ಟ್ ವಿಧಾನವನ್ನು ಅಳವಡಿಸಿಕೊಂಡಿದೆ ಎಂದರು.

ಕೃಷಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ‘ರಾಜ್ಯ ಸರ್ಕಾರ ರೈತರ ಮಕ್ಕಳಿಗೆ ರೈತನಿಧಿ ಯೋಜನೆ ಜಾರಿಗೊಳಿಸಿದೆ. ಈಗ ಕೃಷಿ ಕಾರ್ಮಿಕರ ಮಕ್ಕಳಿಗೂ ಯೋಜನೆ ವಿಸ್ತರಿಸಿದ್ದು, ಶೀಘ್ರ ಅನುದಾನ ಬಿಡುಗಡೆ ಮಾಡಲಾಗುವುದು’ ಎಂದು ಹೇಳಿದರು.

ಕುಲಪತಿ ಡಾ.ಎಸ್‌.ರಾಜೇಂದ್ರ ಪ್ರಸಾದ್ ಹಾಜರಿದ್ದರು.

ಪದಕ ವಿವರ

ಚಿನ್ನದ ಪದಕಗಳು;133

ದಾನಿಗಳ ಚಿನ್ನದ ಪದಕ
ಪ್ರಮಾಣ ಪತ್ರ;23

ಒಟ್ಟು;156


10 ಪೇಟೆಂಟ್‌

ಕೃಷಿಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ರಾಷ್ಟ್ರೀಯ, ಅಂತರರಾಷ್ಟ್ರೀಯ ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಕೃಷಿ ವಿವಿಯು 68 ಎಂಒಯುಗಳಿಗೆ ಸಹಿ ಹಾಕಿದೆ. 10 ಪೇಟೆಂಟ್‌ಗಳನ್ನು ಪಡೆದಿದೆ. ತಲಾ ಒಂದು ಗ್ರಾಮವನ್ನು ಕೃಷಿ ವಿವಿ ದತ್ತು ಪಡೆದಿರುವುದು ಶ್ಲಾಘನೀಯ ಎಂದು ರಾಜ್ಯಪಾಲರು ಹೇಳಿದರು.

***


ಬಡತನ, ಹಸಿವು ಮುಕ್ತ ಮಾಡುವುದು ಮೊದಲ ಆದ್ಯತೆ ಆಗಬೇಕಿದೆ.


– ಡಾ.ಆರ್‌.ಎಸ್‌.ಪರೋಡ, ಅಧ್ಯಕ್ಷ, ಕೃಷಿ ವಿಜ್ಞಾನ ಪ್ರಗತಿ ಟ್ರಸ್ಟ್‌, ನವದೆಹಲಿ


ಕೃಷಿಯಲ್ಲಿ ದೇಶ ಜಾಗತಿಕ ಶಕ್ತಿಯಾಗಲು ಕೃಷಿ, ಆಹಾರ ಸಂಸ್ಕರಣೆ, ಪಶುಸಂಗೋಪನೆ ಕ್ಷೇತ್ರದ ಆಧುನೀಕರಣಕ್ಕೆ ಆದ್ಯತೆ ಕೊಡಬೇಕು.


- ಥಾವರಚಂದ್‌ ಗೆಹಲೋತ್‌, ರಾಜ್ಯಪಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.