ಹೊಸಪೇಟೆ: ಹಿಂದೂ ಸಂಪ್ರದಾಯಕ್ಕೆ ಮಾರು ಹೋಗಿರುವ ಫ್ರಾನ್ಸ್ ಪ್ರಜೆಯೊಬ್ಬರು ತನ್ನ ತಂದೆಯ ಉತ್ತರ ಕ್ರಿಯೆಗಳನ್ನು ಬುಧವಾರ ಹಂಪಿಯಲ್ಲಿ ನೆರವೇರಿಸಿದರು.
ಸಾವಿತ್ರಿ ಎಂದು ಹೆಸರು ಬದಲಿಸಿಕೊಂಡಿರುವ ಫ್ರಾನ್ಸ್ನ ಯುವತಿ, ಹಂಪಿಯ ತುಂಗಭದ್ರಾ ನದಿ ಬಳಿ ಉತ್ತರ ಕ್ರಿಯೆ ಮಾಡಿಸುವ ಮಂಟಪದಲ್ಲಿ ತನ್ನ ತಂದೆಯ ಅಸ್ಥಿಗೆ ಪಂಚಗವ್ಯಗಳ ಅಭಿಷೇಕ ಮಾಡಿಸಿದರು. ನಂತರ ನದಿಯಲ್ಲಿ ಅಸ್ಥಿ ವಿಸರ್ಜಿಸಿದರು.
‘ಸಾವಿತ್ರಿ ಅವರು ಕೆಲ ವರ್ಷಗಳ ಹಿಂದೆ ವಾರಾಣಸಿಯಲ್ಲಿ ಹಿಂದೂಸ್ತಾನಿ ಸಂಗೀತ ಕಲಿಯುತ್ತಿದ್ದರು. ಆಗ ಅವರ ತಂದೆ ಮಗಳ ಭೇಟಿಗೆ ಅಲ್ಲಿಗೆ ಬಂದಿದ್ದರು. ವಾರಾಣಸಿಯಲ್ಲಿ ನದಿ ತೀರದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ, ಶವಗಳನ್ನು ಸುಟ್ಟ ಬಳಿಕ ಅಸ್ಥಿಯನ್ನು ನದಿಯಲ್ಲಿ ವಿಸರ್ಜಿಸುತ್ತಿರುವುದನ್ನು ನೋಡಿದರು. ಅದನ್ನು ನೋಡಿದ ತಂದೆ, ನಾನು ಹಿಂದೂವಾಗಿ ಹುಟ್ಟಬೇಕಿತ್ತು ಎಂದು ಹೇಳಿದರು.
ಅಷ್ಟೇ ಅಲ್ಲ, ನಾನು ಸತ್ತ ನಂತರ ಹಿಂದೂ ಸಂಪ್ರದಾಯದ ಪ್ರಕಾರ ಅಸ್ಥಿ ವಿಸರ್ಜನೆ ಮಾಡಬೇಕೆಂದು ಮಗಳಿಗೆ ಹೇಳಿದ್ದರಂತೆ. ಹೀಗಾಗಿ ಮಗಳು ಹಂಪಿಗೆ ಬಂದು ಅಸ್ಥಿ ವಿಸರ್ಜಿಸಿದರು. ಇದನ್ನೆಲ್ಲ ಸಾವಿತ್ರಿಯೇ ವಿವರಿಸಿದರು’ ಎಂದು ಪುರೋಹಿತ ಮೋಹನ್ ಚಿಕ್ಕಭಟ್ ಜೋಶಿ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.