ಕಾರವಾರ:ಅರಣ್ಯ ಅತಿಕ್ರಮಣದಾರರಿಗೆ ಹಕ್ಕುಪತ್ರಗಳನ್ನು ನೀಡುವಂತೆಸರ್ಕಾರದ ಮೇಲೆ ಒತ್ತಡ ಹೇರಲು ಫೆ.12ರಂದು ‘ಬೆಂಗಳೂರು ಚಲೋ’ ಹಮ್ಮಿಕೊಳ್ಳಲು ಜಿಲ್ಲಾ ಅರಣ್ಯ ಅತಿಕ್ರಮಣ ಹೋರಾಟಗಾರರ ವೇದಿಕೆ ತೀರ್ಮಾನಿಸಿದೆ.
ಜಿಲ್ಲೆಯಲ್ಲಿ ಹಕ್ಕುಪತ್ರ ಕೋರಿ ಸಲ್ಲಿಸಲಾಗಿದ್ದ 91 ಸಾವಿರ ಅರ್ಜಿಗಳ ಪೈಕಿ ಕಳೆದ ವರ್ಷ ಡಿಸೆಂಬರ್ ಕೊನೆಯವರೆಗೆ 65,220 ತಿರಸ್ಕೃತವಾಗಿವೆ. ಇದರ ವಿರುದ್ಧ ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಜಿಲ್ಲೆಯ ವಿವಿಧ ತಾಲ್ಲೂಕುಗಳ ಸಾವಿರಾರುಒತ್ತುವರಿದಾರರುಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಎ.ರವೀಂದ್ರ ನಾಯಕ, ‘ಮೂರು ತಲೆಮಾರು ಹಿಂದಿನ ವಾಸ್ತವ್ಯದ ದಾಖಲೆಗಳನ್ನು ಕೊಡಲಿಲ್ಲ ಎಂದುಅಧಿಕಾರಿಗಳು ಅರ್ಜಿಗಳನ್ನು ತಿರಸ್ಕರಿಸುತ್ತಿದ್ದಾರೆ. ಆದರೆ, ನಿರ್ದಿಷ್ಟ ದಾಖಲೆಗಳಿಗೆ ಒತ್ತಾಯಿಸುವಂತಿಲ್ಲ. ಮೂರು ದಶಕಗಳಿಂದ ಜನವಸತಿ ಇರುವುದನ್ನು ಸಾಬೀತುಪಡಿಸಿದರೆ ಸಾಕು ಎಂದು ವೀರಪ್ಪ ಮೊಯಿಲಿನೇತೃತ್ವದ ರಾಜ್ಯಸರ್ಕಾರ ತಿಳಿಸಿತ್ತು’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಅತಿಕ್ರಮಣದಾರರಿಗೆ ಹಕ್ಕುಪತ್ರ ಕೊಡುವ ವಿಚಾರ ಪ್ರತಿಬಾರಿ ಚುನಾವಣೆಯ ಸಂದರ್ಭದಲ್ಲಿ ರಾಜಕಾರಣಿಗಳಿಗೆ ನೆನಪಾಗುತ್ತದೆ. ಆದರೆ, ನಂತರ ಈ ವಿಷಯ ಅವರಿಗೆ ಬೇಡದ ಕೂಸಾಗುತ್ತದೆ. ನಾವು ಅವರಿಗೆ ಬೇಡ ಎಂದಾದರೆ ನಮಗೂ ಅವರು ಬೇಡ. ಹಾಗಾಗಿ ಈ ಬಾರಿಯಲೋಕಸಭಾ ಚುನಾವಣೆಯನ್ನು ನಾವು ಯಾಕೆ ಬಹಿಷ್ಕರಿಸಬಾರದು’ ಎಂದು ಪ್ರಶ್ನಿಸಿದರು.
‘ಈ ವಿಚಾರದಲ್ಲಿ ವಿಧಾನಸಭೆಅಧಿವೇಶನದಲ್ಲಿ ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಜನಪ್ರತಿನಿಧಿಗಳ ಮನೆಗಳ ಮುಂದೆ ಧರಣಿ ಕೂರುತ್ತೇವೆ. ಸರ್ಕಾರಕ್ಕೆ ಇದು ಕೊನೆಯ ಎಚ್ಚರಿಕೆ’ ಎಂದರು.
ಸಿದ್ದಾಪುರ ತಾಲ್ಲೂಕು ಪಂಚಾಯ್ತಿ ಸದಸ್ಯ ನಸೀರ್ ಖಾನ್ ಮಾತನಾಡಿ, ‘ಹತ್ತಾರು ವರ್ಷಗಳಿಂದ ನಾವು ವಾಸವಿರುವ ಜಾಗಕ್ಕೆ ಹಕ್ಕುಪತ್ರ ಪಡೆದುಕೊಳ್ಳಲು ನಮ್ಮ ಮರಣಪತ್ರಕೊಡುವುದು ಮಾತ್ರ ಬಾಕಿಯಿದೆ. ಒಂದುವೇಳೆ, ಹಕ್ಕುಪತ್ರ ಕೊಡುತ್ತಾರೆ ಎಂದಾದರೆ ಅದನ್ನೂ ನಾವು ಕೊಡಲು ಸಿದ್ಧರಿದ್ದೇವೆ. ನಾವಲ್ಲದಿದ್ದರೂ ನಮ್ಮ ಮಕ್ಕಳಾದರೂ ನೆಮ್ಮದಿಯಿಂದ ಜೀವನ ನಡೆಸಬಹುದು’ ಎಂದು ಬೇಸರದಿಂದ ನುಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.