ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಕುಂದುಕೆರೆ ವಲಯದ ಲೊಕ್ಕೆರೆಯ ಸುತ್ತಮುತ್ತಲಿನ ಮೂರು ಗುಡ್ಡಗಳು ಮತ್ತು ಕೆಬ್ಬೆಪುರ ಬಳಿ ಎರಡು ಗುಡ್ಡಗಳು ಕಾಳ್ಗಿಚ್ಚಿಗೆಆಹುತಿಯಾಗಿವೆ. 600 ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದೆ.
ಗುರುವಾರ ಮಧ್ಯಾಹ್ನ ಲೊಕ್ಕೆರೆಯ ನಡುಬೆಟ್ಟದ ಬಳಿ ಬೆಂಕಿ ಕಾಣಿಸಿಕೊಂಡಿತು. ಸಂಜೆಯ ಹೊತ್ತಿಗೆಸಮೀಪದ ಮೂರು ಬೆಟ್ಟಗಳಿಗೂ ವ್ಯಾಪಿಸಿಸಂಪೂರ್ಣವಾಗಿ ಭಸ್ಮವಾಯಿತು. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಬೆಂಕಿ ನಂದಿಸಲು ಪ್ರಯತ್ನಿಸಿದರೂ, ಜೋರಾಗಿ ಬೀಸುತ್ತಿದ್ದ ಗಾಳಿಯಿಂದಾಗಿ ಅದು ಯಶಸ್ವಿಯಾಗಲಿಲ್ಲ.
ಬೆಂಕಿ ನಿಯಂತ್ರಣಕ್ಕೆ ಸಿಗದೆ ಹಾನಂಜಿ ಹುಂಡಿಯಿಂದ ಬರೆಕಟ್ಟೆ, ಮೆಣಸಿಮೊಕ್ಕ ಬೆಟ್ಟ, ಹಟ್ನಿ ಕಲ್ಲರೆ ಬೆಟ್ಟ, ಗುಡ್ಡೆಕೆರೆ, ಬರೆಕಟ್ಟೆ ಭಾಗಕ್ಕೂ ಹಬ್ಬಿತು. ಬೆಂಕಿಯ ಜ್ವಾಲೆಗೆ ಮೊಲ, ಜಿಂಕೆಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಾಡುತ್ತಿದ್ದವು.ಬೆಂಕಿ ಬಿದ್ದ ಜಾಗದಲ್ಲಿ ಹುಲಿಯೊಂದು ಕಡವೆಯನ್ನು ಬೇಟೆಯಾಡಿತ್ತು. ಕಡವೆ ತಿನ್ನಲು ಬಂದ ಹುಲಿ, ಬೆಂಕಿಗೆ ಹೆದರಿ ಬೇರೆಡೆಗೆ ತೆರಳಿತು.
ಸಂಜೆಯಾದರೂ ಬೆಂಕಿ ಹತೋಟಿಗೆ ಬರಲಿಲ್ಲ. ನಾಲ್ಕೈದು ಗಂಟೆಗಳ ಅವಧಿಯಲ್ಲಿ 4 ಕಿ.ಮೀ ದೂರದವರೆಗೂ ವ್ಯಾಪಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.