ಹೊಸಪೇಟೆ: ಫ್ರಾನ್ಸ್ ದೇಶದ ಮೂವರು ಪ್ರಜೆಗಳು ತಾಲ್ಲೂಕಿನ ಹಂಪಿ ವಿರೂಪಾಕ್ಷೇಶ್ವರ ದೇಗುಲದಲ್ಲಿ ಭಾನುವಾರ ಹರಕೆ ತೀರಿಸಿದರು.
ಉಂಬೆರ್ಟೋ, ಜೀನ್ ಲುಕಾಸ್ ಮತ್ತು ಜೀನ್ ಅವರು ವಿರೂಪಾಕ್ಷೇಶ್ವನಿಗೆ ₹20 ಸಾವಿರ ಮೌಲ್ಯದ ನಾಗರ ವಿಗ್ರಹ, ಎರಡು ಹಿತ್ತಾಳೆ ದೀಪ ಸಮರ್ಪಿಸಿ ಹರಕೆ ಈಡೇರಿಸಿದರು.
ಇದಕ್ಕೂ ಮುನ್ನ ಮೂವರೂ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ, ಶ್ವೇತ ವಸ್ತ್ರ ಧರಿಸಿ, ಹಣೆಗೆ ತಿಲಕ ಹಚ್ಚಿಕೊಂಡು ವಿರೂಪಾಕ್ಷನಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದೇಗುಲದ ಅರ್ಚಕರಾದ ಶೇಷುಸ್ವಾಮಿ, ಪ್ರಶಾಂತ ಪೂಜಾರ ಹಾಗೂ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಬಿ. ಶ್ರೀನಿವಾಸ್ ಅವರಿಗೆ ವಿಗ್ರಹ, ದೀಪ ಸೇರಿದಂತೆ ಇತರೆ ವಸ್ತುಗಳನ್ನು ನೀಡಿದರು.
‘ನಮಗೆ ಹಿಂದೂ ಸಂಪ್ರದಾಯ ಎಂದರೆ ಬಹಳ ಇಷ್ಟ. ನಾವೆಲ್ಲ ಪುಟ್ಟಪರ್ತಿ ಸಾಯಿಬಾಬಾ ಭಕ್ತರು. ಪ್ರತಿ ವರ್ಷ ಭಾರತಕ್ಕೆ ಬಂದು ಪುಣ್ಯ ಸ್ಥಳಗಳಿಗೆ ಭೇಟಿ ಕೊಡುತ್ತೇವೆ. ಈ ವರ್ಷ ಹಂಪಿಗೆ ಬಂದು ವಿರೂಪಾಕ್ಷೇಶ್ವರನಿಗೆ ಪೂಜೆ ಸಲ್ಲಿಸಿದ್ದೇವೆ’ ಎಂದು ಜೀನ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.