ಮೈಸೂರು: ಕೋವಿಡ್-19 ಲಾಕ್ಡೌನ್ನಿಂದಾಗಿ ಮುಚ್ಚಿರುವ ಶಾಲೆಗಳನ್ನು ಮೂರು ತಿಂಗಳು ತೆರೆಯಬೇಡಿ. ಅಕ್ಟೋಬರ್ನಿಂದ ಎರಡು ಶಿಫ್ಟ್ನಲ್ಲಿ ಶಾಲೆ ನಡೆಸಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಕೋವಿಡ್ ತಗುಲದಂತೆ ಎಚ್ಚರಿಕೆ ವಹಿಸಬೇಕು. ಈ ನಿಟ್ಟಿನಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಿ. ಈ ವಿಷಯದಲ್ಲಿ ಆತುರ ಬೇಡ. ಕೊರೊನಾ ವೈರಸ್ಗೆ ಇನ್ನೂ ಲಸಿಕೆ ಸಿಕ್ಕಿಲ್ಲ. ದೈಹಿಕ ಅಂತರ ಕಾಪಾಡಿಕೊಳ್ಳುವುದು ಮತ್ತು ಮಾಸ್ಕ್ ಧರಿಸುವುದೇ ಸದ್ಯಕ್ಕಿರುವ ಮದ್ದು ಎಂದರು.
ಕೋವಿಡ್-19 ಪೀಡಿತರಿಗೆ ಮಲೇರಿಯಾ ಔಷಧಿ ಕೊಡುತ್ತಿದ್ದಾರೆ. ಶಾಲೆ ತೆರೆದ ಫ್ರಾನ್ಸ್ನಲ್ಲಿ ಮಕ್ಕಳಿಗೆ ಕೋವಿಡ್ ಬಂದಿದೆ. ಎಚ್ಚರಿಕೆಯಿರಲಿ ಎಂದು ತಿಳಿಸಿದರು.
ಈ ಕಠಿಣ ಪರಿಸ್ಥಿತಿಯಲ್ಲಿ ನಾನು ರಾಜ್ಯದ ಮುಖ್ಯಮಂತ್ರಿ ಆಗಿದ್ದರೆ 1 ಕೋಟಿ ಕುಟುಂಬಗಳಿಗೆ ತಲಾ ₹10 ಸಾವಿರ ನೀಡುತ್ತಿದ್ದೆ. ಪರಿವಾರ, ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಯತ್ನ ಆರಂಭವಾಗಿದ್ದು ಕೂಡ ನನ್ನ ಅವಧಿಯಲ್ಲೇ ಎಂದರು.
ರಾಜ್ಯಸಭೆಗೆ ಮಲ್ಲಿಕಾರ್ಜುನ ಖರ್ಗೆ ಹೆಸರು ಪ್ರಸ್ತಾಪ ಕುರಿತಂತೆ ಹೈಕಮಾಂಡ್ ಜತೆ ಚರ್ಚಿಸಿರುವೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ಗೆ ನನ್ನ ವೈಯಕ್ತಿಕ ಅಭಿಪ್ರಾಯ ಹೇಳಿರುವೆ. ಎಚ್.ಡಿ. ದೇವೇಗೌಡರನ್ನು ಬೆಂಬಲಿಸುವ ಬಗ್ಗೆ ನಾನು ಏನು ಹೇಳುವುದಿಲ್ಲ. ಪಕ್ಷದಲ್ಲಿ ಈ ಬಗ್ಗೆ ಚರ್ಚೆಯೇ ನಡೆದಿಲ್ಲ. ಈ ವಿಷಯದಲ್ಲಿ ನಾನು ಹೈಕಮಾಂಡ್ ನಿಲುವಿಗೆ ಬದ್ಧನಾಗಿದ್ದೇನೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.