ADVERTISEMENT

ಉಚಿತವಾಗಿ ನೇತ್ರ ಚಿಕಿತ್ಸೆ; ಜನವರಿಯಲ್ಲಿ ಅನುಷ್ಠಾನ‌: ಸಿಎಂ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 7:40 IST
Last Updated 7 ಡಿಸೆಂಬರ್ 2022, 7:40 IST
ಉಚಿತವಾಗಿ ನೇತ್ರ ಚಿಕಿತ್ಸೆ; ಜನವರಿಯಲ್ಲಿ ಅನುಷ್ಠಾನ‌: ಸಿಎಂ ಬೊಮ್ಮಾಯಿ
ಉಚಿತವಾಗಿ ನೇತ್ರ ಚಿಕಿತ್ಸೆ; ಜನವರಿಯಲ್ಲಿ ಅನುಷ್ಠಾನ‌: ಸಿಎಂ ಬೊಮ್ಮಾಯಿ   

ತುಮಕೂರು: 60 ವರ್ಷ ಮೇಲ್ಪಟ್ಟವರಿಗೆ ಸಂಪೂರ್ಣವಾಗಿ ಉಚಿತವಾಗಿ ನೇತ್ರ ತಪಾಸಣೆ ಮಾಡಿ ಚಿಕಿತ್ಸೆ ನೀಡಿ, ಕನ್ನಡಕ ನೀಡುವ ಯೋಜನೆಯನ್ನು ಜನವರಿಯಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರ ಹೊರವಲಯದ ಶೆಟ್ಟಿಹಳ್ಳಿ ರಿಂಗ್ ರಸ್ತೆಯ ಬಳಿ ಬುಧವಾರ ನಾರಾಯಣ ದೇವಾಲಯ ಉಚಿತ ನೇತ್ರ ಚಿಕಿತ್ಸಾ ಕೇಂದ್ರ ಉದ್ಘಾಟಿಸಿದ ನಂತರ ಮಾತನಾಡಿದರು.
ಆಸ್ಪತ್ರೆಗೆ ಬರುವ ಜನರಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಲು ಆಸ್ಪತ್ರೆ ಮಾಲೀಕರು ಯೋಜನೆ ರೂಪಿಸಬೇಕು. ಬಡವರು ಒಳ್ಳೆಯ ಚಿಕಿತ್ಸೆ ಪಡೆಯಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದ‌ನ್ನು ಎಲ್ಲರು ಗಂಭೀರವಾಗಿ ತೆಗೆದುಕೊಳ್ಳಬೇಕು. ಆರ್ಥಿಕ ಸ್ಥಿತಿಯ ಕಾರಣದಿಂದಾಗಿ ಎಷ್ಟೋ ಜನ ಚಿಕಿತ್ಸೆ ಪಡೆಯಲು ಆಗದೆ ಪರದಾಡುತ್ತಿದ್ದಾರೆ. ಈ ಬಗ್ಗೆ ಎಲ್ಲರು ಚಿಂತನೆ ನಡೆಸಬೇಕಿದೆ ಎಂದರು.

ಕಣ್ಣುಗಳು ಇಲ್ಲ ಎಂದು ಯೋಚನೆ ಮಾಡಿದರೆ ಇಡೀ ಜಗತ್ತು ಕತ್ತಲು ಆಗುತ್ತದೆ. ದೇವರ ಸೃಷ್ಟಿಯಲ್ಲಿ ಹೃದಯದ ನಂತರ ಕಣ್ಣುಗಳು ಪ್ರಮುಖ ಸ್ಥಾನ ಪಡೆದಿವೆ. ಕಣ್ಣುಗಳಿಂದ ನೋಡುವ ಮೂಲಕ ಜ್ಞಾನ ಪ್ರಾಪ್ತಿಯಾಗುತ್ತದೆ ಎಂದರು.

ADVERTISEMENT

ಕಣ್ಣಿನ ತೊಂದರೆ, ಆಪತ್ತು ನಿವಾರಣೆ ಮಾಡುವಂತಹ ತಂತ್ರಜ್ಞಾನ ಬೆಳೆದಿದೆ. ನಾರಾಯಣ ನೇತ್ರಾಲಯದ ಕೆ.ಭುಜಗಂಶೆಟ್ಟಿ ಅವರು ದೊಡ್ಡ ಪ್ರಮಾಣದಲ್ಲಿ ಸೇವೆ ಮಾಡುತ್ತಿದ್ದಾರೆ. ಕಣ್ಣಿನ ದಾನ ಮಾಡಲು ಅಭಿಯಾನ ಮಾಡಿದ್ದರು, ಇಂದು ಎಲ್ಲರು ಕಣ್ಣು ದಾನ ಮಾಡಲು ಮುಂದಾಗಿದ್ದಾರೆ ಎಂದು ಹೇಳಿದರು.

ನಾರಾಯಣ ನೇತ್ರಾಲಯದಲ್ಲಿ ಸಂಪೂರ್ಣವಾಗಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಸರ್ಕಾರದಿಂದ ಅನುಷ್ಠಾನಕ್ಕೆ ತರುವ ಯೋಜ‌ನೆಗೂ ಕೆ.ಭುಜಂಗಶೆಟ್ಟಿ ನೇತೃತ್ವ ವಹಿಸಿಕೊಳ್ಳಬೇಕು ಎಂದು ಕೋರಿದರು.

ನಾರಾಯಣ ನೇತ್ರಾಲಯದಂತಹ ಆಸ್ಪತ್ರೆ ರಾಜ್ಯದಲ್ಲಿ ಎಲ್ಲೂ ಇಲ್ಲ ಎಂಬುವುದು ನನ್ನ ಅಭಿಪ್ರಾಯ. ಎಲ್ಲ ಸೌಲಭ್ಯಗಳನ್ನು ಒಳಗೊಂಡ ಆಸ್ಪತ್ರೆಯಾಗಿದೆ. ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಎಲ್ಲ ಯಶಸ್ವಿ ವೈದ್ಯರು ಇದನ್ನು ಅನುಸರಿಸಬೇಕು ಎಂದರು.

ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ನಾರಾಯಣ ನೇತ್ರಾಲಯದ ಡಾ.ಕೆ.ಭುಜಂಗ ಶೆಟ್ಟಿ, ಸಚಿವರಾದ ಬಿ.ಸಿ.ನಾಗೇಶ್, ಗೋಂವಿದ ಕಾರಜೋಳ, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಸಿ.ಎಂ.ರಾಜೇಶ್ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.