ಕೋವಿಡ್ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ಹೇಗೆ?
ಪ್ರಜಾವಾಣಿ ವಾರ್ತೆ Published 3 ಜುಲೈ 2020, 4:52 IST Last Updated 3 ಜುಲೈ 2020, 4:52 IST ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಅಂತ್ಯ ಸಂಸ್ಕಾರದ ಸನ್ನಿವೇಶ
ಬೆಂಗಳೂರು: ಕೋವಿಡ್ನಿಂದ ಮೃತಪಟ್ಟವರ ದೇಹಗಳನ್ನು ಸೂಕ್ತ ತರಬೇತಿ ಹೊಂದಿದ ಸಿಬ್ಬಂದಿ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ನೇರವಾಗಿ ಶವಾಗಾರಕ್ಕೆ ಸಾಗಿಸಬೇಕು. ಅಧಿಕ ಸಮಯ ಮೃತ ದೇಹವನ್ನು ಇಡಕೂಡದು.
ಇದುಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಯ ಸ್ಪಷ್ಟ ನಿರ್ದೇಶನ.
- ರೋಗಿಯ ಮೃತ ದೇಹವನ್ನು ಹೇಗೆ ನಿರ್ವಹಣೆ ಮಾಡಬೇಕು ಹಾಗೂ ಹೇಗೆ ಸಂಸ್ಕಾರ ಮಾಡಬೇಕು ಎಂಬುದರ ಬಗ್ಗೆ ವಿವರ ನೀಡಲಾಗಿದೆ.
- ಕೋವಿಡ್ ಸಾಂಕ್ರಾಮಿಕ ರೋಗ ಆಗಿರುವುದರಿಂದ ಮೃತಪಟ್ಟ ಕೂಡಲೇ, ಸೂಕ್ತ ಮುನ್ನೆಚ್ಚರಿಕೆಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಬೇಕು.
- ಕುಟುಂಬದ ಸದಸ್ಯರು ಪಾರ್ಥಿವ ಶರೀರವನ್ನು ನೋಡಲು ಇಚ್ಛಿಸಿದಲ್ಲಿ ಮುನ್ನೆಚ್ಚರಿಕೆಯ ಮಾನದಂಡದೊಂದಿಗೆ ಅವಕಾಶ ನೀಡಬೇಕು.
- ಮೃತ ದೇಹ ದೀರ್ಘಕಾಲದವರೆಗೆ ಕೆಡದಂತೆ ಇಡಲು ಅವಕಾಶ ನೀಡಬಾರದು. ಮರಣೋತ್ತರ ಪರೀಕ್ಷೆ ಮಾಡಿದಲ್ಲಿ, ಸೋಂಕು ನಿಯಂತ್ರಣ ರಕ್ಷಾ ಕವಚವನ್ನು ಅಳವಡಿಸಬೇಕು.
- ಮೃತ ದೇಹದ ಮುಂದೆ ಧಾರ್ಮಿಕ ಶ್ಲೋಕಗಳ ಪಠಣ, ಪವಿತ್ರ ಜಲ ಸಿಂಪರಣೆ,ಮೃತ ದೇಹಕ್ಕೆ ಸ್ನಾನ ಮಾಡಿಸುವುದು ಸೇರಿದಂತೆ ಇನ್ನಿತರೆ ಧಾರ್ಮಿಕ ವಿಧಿ ವಿಧಾನಗಳಿಗೆ ಅವಕಾಶ ಇರುವುದಿಲ್ಲ.
- ಸುರಕ್ಷತಾ ಸಾಧನಗಳನ್ನು ಧರಿಸದಿದ್ದವರು ಮೃತದೇಹವನ್ನು ಸ್ಪರ್ಶಿಸದಂತೆ ನೋಡಿಕೊಳ್ಳಬೇಕು.
- ಅಗ್ನಿಸ್ಪರ್ಶ ಮಾಡುವವರು, ಹೂಳುವ ಸಿಬ್ಬಂದಿ ಮತ್ತು ಕುಟುಂಬದ ಸದಸ್ಯರು ಅಂತ್ಯಸಂಸ್ಕಾರದ ಬಳಿಕ ತಮ್ಮ ಬಟ್ಟೆ ಹಾಗೂ ಕೈಗಳನ್ನು ಶುಚಿಗೊಳಿಸಿಕೊಳ್ಳುವಂತೆ ನೋಡಿಕೊಳ್ಳಬೇಕು.
- ಮೃತ ವ್ಯಕ್ತಿಯ ಅಸ್ಥಿಯಿಂದ ಯಾವುದೇ ಅಪಾಯವಿಲ್ಲ. ಹಾಗಾಗಿ ಸಂಗ್ರಹಿಸಲು ಅವಕಾಶ ನೀಡಬಹುದು.
- ರೋಗ ಲಕ್ಷಣ ಇರದ ಕುಟುಂಬದ ಸದಸ್ಯರು ಭಾಗವಹಿಸಬಹುದು. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಹಾಗಿಲ್ಲ. ಪರಸ್ಫರ ಅಂತರ ಕಾಯ್ದುಕೊಳ್ಳಬೇಕು.
ಕೆಲವೆಡೆ ಮೃತರ ಕುಟುಂಬದ ಸದಸ್ಯರು ಮುಂದೆ ಬರುತ್ತಿಲ್ಲ. ಅಂತಹ ಸಂದರ್ಭದಲ್ಲಿ ಅನಾಥ ಶವವನ್ನು ಸಿಬ್ಬಂದಿಯೇ ಮುಂದೆ ನಿಂತು ಅಂತ್ಯಕ್ರಿಯೆ ನಡೆಸಬೇಕಾಗುತ್ತಿದೆ
– ಡಾ. ಓಂ ಪ್ರಕಾಶ್ ಪಾಟೀಲ್, ಆರೋಗ್ಯ ಇಲಾಖೆ ನಿರ್ದೇಶಕ