ಗದಗ: ‘ಭಾರತದ ಅನ್ನವನ್ನು ತಿಂದು, ಪಾಕಿಸ್ತಾನದ ಪರ ಘೋಷಣೆ ಕೂಗಿ ಈಗ ಜೈಲಿನಲ್ಲಿರುವ ಹುಬ್ಬಳ್ಳಿ ಕೆಎಲ್ಇ ಕಾಲೇಜಿನ ಮೂವರು ವಿದ್ಯಾರ್ಥಿಗಳ ನಾಲಿಗೆ ಕತ್ತರಿಸಿಕೊಂಡು ತಂದರೆ, ಶ್ರೀರಾಮಸೇನೆಯವರಿಗೆ ಒಂದು ನಾಲಿಗೆಗೆ ತಲಾ ₹ 1 ಲಕ್ಷದಂತೆ ಒಟ್ಟು ₹3 ಲಕ್ಷ ಬಹುಮಾನ ನೀಡಲಾಗುವುದು’ ಎಂದು ಜೇವರ್ಗಿಯ ಆಂದೋಲಾದ ಕರುಣೇಶ್ವರ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಬುಧವಾರ ರಾತ್ರಿ ಗದುಗಿನಲ್ಲಿ ಶ್ರೀರಾಮಸೇನೆ ವತಿಯಿಂದ ನಡೆದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪಾಕಿಸ್ತಾನದ ಪರ ಘೋಷಣೆ ಕೂಗಲು ಇದು ಇಮ್ರಾನ್ಖಾನ್ನ ದೇಶವಲ್ಲ, ಇದು ಮೋದಿಯ ದೇಶ, ಛತ್ರಪತಿ ಶಿವಾಜಿಯ ದೇಶ. ಇನ್ನೊಮ್ಮೆ ಪಾಕ್ ಪರ ಘೋಷಣೆ ಕೂಗಿದರೆ ಅವರ ನಾಲಿಗೆ ಕತ್ತರಿಸಲಾಗುವುದು’ ಎಂದು ಎಚ್ಚರಿಸಿದರು.
‘ಒಂದು ಕಪಾಳಕ್ಕೆ ಹೊಡೆದವರಿಗೆ, ಇನ್ನೊಂದು ಕಪಾಳ ತೋರಿಸು ಎಂದ ಗಾಂಧಿತತ್ವ ನಮಗೆ ಬೇಕಾಗಿಲ್ಲ. ಈ ದೇಶವನ್ನು ಒಡೆದು ಪಾಕಿಸ್ತಾನವನ್ನು ನಿರ್ಮಾಣ ಮಾಡಿದವರು ರಾಷ್ಟ್ರಪಿತರಾದದ್ದು ನಮ್ಮ ದುರದೃಷ್ಟ’ ಎಂದು ಸ್ವಾಮೀಜಿ ಹೇಳಿದರು.
‘ಪೊಲೀಸರನ್ನು ದೇವದಾಸಿಯರು ಎಂದು ಕರೆದ ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಬಂಧಿಸಬೇಕು’ ಎಂದು ಅವರು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.