ಬೆಂಗಳೂರು: ‘ಗಾಂಧಿ ಎಂದರೆ ಕೇವಲ ವ್ಯಕ್ತಿಯಲ್ಲ, ಶಕ್ತಿಯೂ ಅಲ್ಲ. ಅದೊಂದು ಜೀವನ ವಿಧಾನ’ ಎಂದು ಲೇಖಕ ಎನ್. ಜಗದೀಶ್ ಕೊಪ್ಪ ಅಭಿಪ್ರಾಯಪಟ್ಟರು.
ಗಾಂಧಿ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸರ್ವೋದಯ ದಿನಾಚರಣೆ, ಸೇವಾ ಯೋಜನೆ ಕಾರ್ಯಾಗಾರ ಮತ್ತು ಗಾಂಧಿ ಚಿಂತಕರೊಂದಿಗೆ ಸಂವಾದದಲ್ಲಿ ಅವರು ಮಾತನಾಡಿದರು.
‘ಹಿರಿಯರು ಗಾಂಧಿಯನ್ನು ಆರಾಧನೆಯ ನೆಲೆಯಲ್ಲಿ ನೋಡಿಕೊಂಡು ಬಂದಿದ್ದು, ನಮ್ಮ ತಲೆಮಾರಿನವರು ಗಾಂಧಿಯನ್ನು ಮುಂದಿನ ಪೀಳಿಗೆಗೆ ಹೇಗೆ ತಲುಪಿಸುವ ಬಗ್ಗೆ ಆಲೋಚನೆ ನಡೆಸಿಕೊಂಡು ಬಂದಿದ್ದೇವೆ’ ಎಂದರು.
‘ಕುಟುಂಬದೊಳಗೇ ಸಾಕಷ್ಟು ನೋವಿದ್ದರೂ, ಅದನ್ನು ಹೊರ ಜಗತ್ತಿಗೆ ತೋರಿಸಿಕೊಳ್ಳದೆ ಇಡೀ ಸ್ವಾತಂತ್ರ್ಯ ಹೋರಾಟದ ಭಾರವನ್ನು
ಗಾಂಧಿ ಹೊತ್ತಿದ್ದರು. ಅವರನ್ನು ನಾವು ವಿವಿಧ ಆಯಾಮಗಳಲ್ಲಿ ಅರ್ಥ ಮಾಡಿಕೊಳ್ಳಬೇಕಿದೆ. ಆಗ ಮಾತ್ರ ಈವರೆಗೂ ನಮಗೆ ದಕ್ಕದ ಮಹಾತ್ಮ ದಕ್ಕುತ್ತಾರೆ’ ಎಂದು ಹೇಳಿದರು.
ಮೈಸೂರಿನ ರಾಮಕೃಷ್ಣ ಆಶ್ರಮದ ಸ್ವಾಮಿ ಶಾಂತಿವ್ರತಾನಂದಮಾತನಾಡಿ, ‘ಶಿಕ್ಷಣ ಎಂಬುದು ಸಾಧನೆ ಮತ್ತು ಸಾಧನ ಎಂದು ಗಾಂಧೀಜಿ ಹೇಳುತ್ತಿದ್ದರು. ಆದರೆ, ಇಂದಿನ ಶಿಕ್ಷಣ ಹೊಟ್ಟೆ ಬಟ್ಟೆಗೆ ಸೀಮಿತವಾಗಿದೆ. ಗಾಂಧೀಜಿ ಬದುಕಿನ ಕುರಿತು 100 ಸಂಪುಟಗಳಿವೆ. ಅದರಲ್ಲಿಒಂದು ಸಂಪುಟವನ್ನಾದರೂ ಓದುವ ಪ್ರಯತ್ನವನ್ನು ನಾವೆಲ್ಲರೂಮಾಡುತ್ತಿಲ್ಲ. ಉತ್ತಮ ಜೀವನ ರೂಪಿಸಿಕೊಳ್ಳಲು ಇಂತವರ ಜೀವನವನ್ನು ಓದಬೇಕು. ಗಾಂಧೀಜಿ ಅವರ ಒಂದೆರಡು ಸಂದೇಶಗಳನ್ನು ನಾವು ಅಳವಡಿಸಿಕೊಂಡರೆ ಸಾರ್ಥಕ ಬದುಕು ನಡೆಸಬಹುದು’ ಎಂದು ಹೇಳಿದರು.
ಬಾಪು ಪ್ರಪಂಚ ಸಂಚಿಕೆ ಜತೆಗೆ 5 ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಗಾಂಧಿ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.