ಚಿಂಚೋಳಿ (ಕಲಬುರ್ಗಿ ಜಿಲ್ಲೆ): ಉದ್ಯೋಗ ಅರಸಿ ತೆಲಂಗಾಣದ ಹೈದರಾಬಾದ್ ನಗರಕ್ಕೆ ಗುಳೆ ಹೋಗಿದ್ದ ಚಿಂಚೋಳಿ ತಾಲ್ಲೂಕಿನ ಗಣಾಪುರ ಗ್ರಾಮದ ಕುಟುಂಬವೊಂದರ ಮೂವರು ಸದಸ್ಯರು(ತಂದೆ, ತಾಯಿ ಹಾಗೂ ಮಗ) ಗ್ಯಾಸ್ ಸಿಲಿಂಡರ್ ಸೋರಿಕೆ ಪರಿಣಾಮ ಸಂಭವಿಸಿದ ಅಗ್ನಿ ಅವಘಡದಲ್ಲಿದಾರುಣವಾಗಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಬಿಚ್ಚಪ್ಪ ತಳವಾರ (55), ಮಹಾದೇವಿ ಬಿಚ್ಚಪ್ಪ ತಳವಾರ (48), ಮಲ್ಲಿಕಾರ್ಜುನ ಬಿಚ್ಚಪ್ಪ ತಳವಾರ (28) ಮೃತಪಟ್ಟ ದುರ್ದೈವಿಗಳು. ಹೈದರಾಬಾದ್ನ ಮಿಯ್ಯಾಪುರ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಕುಟುಂಬ ಭಾನುವಾರ ಬೆಳಗಿನ ಜಾವ ಚಹಾ ಮಾಡಿಕೊಳ್ಳಲು ಸಣ್ಣ ಸಿಲಿಂಡರ್ ಗ್ಯಾಸ್ ಹಚ್ಚಲು ಹೋದ ಸಂದರ್ಭದಲ್ಲಿ ಸೋರಿಕೆಯಾಗಿ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಮೂವರೂ ಗಾಯಗೊಂಡಿದ್ದು, ಅವರನ್ನು ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ನಸುಕಿನ ಜಾವದಲ್ಲಿ ಒಬ್ಬರು ಹಾಗೂ ಸೋಮವಾರ ಸಂಜೆ ಒಬ್ಬರು ಮತ್ತು ರಾತ್ರಿ 9.30ಕ್ಕೆ ಒಬ್ಬರು ಕೊನೆಯುಸಿರೆಳೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.