ADVERTISEMENT

ತಾಳಿ ಕಟ್ಟಿಸಿಕೊಳ್ಳದಿದ್ದಕ್ಕೆ ಬಾಲಕಿಯನ್ನೇ ಕೊಂದ

ಗಿರಿನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ; ಆರೋಪಿ ರೌಡಿ ಬಂಧನ

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 19:42 IST
Last Updated 14 ಜುಲೈ 2020, 19:42 IST
   

ಬೆಂಗಳೂರು: ತಾಳಿ ಕಟ್ಟಿಸಿಕೊಳ್ಳಲು ಒಪ್ಪಲಿಲ್ಲವೆಂಬ ಕಾರಣಕ್ಕೆ ಬಾಲಕಿಯೊಬ್ಬಳನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ಈ ಸಂಬಂಧ ರೌಡಿ ಮುನಿರಾಜು ಅಲಿಯಾಸ್ ಅಭಿಗೌಡ (21) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

‘ಗಿರಿನಗರ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ರಾಜಾಜಿನಗರ ಠಾಣೆ ರೌಡಿ ಪಟ್ಟಿಯಲ್ಲಿ ಹೆಸರಿರುವ ಅಭಿಗೌಡನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

’ರಾಜಾಜಿನಗರ ಠಾಣೆ ವ್ಯಾಪ್ತಿಯಲ್ಲಿ 17 ವರ್ಷದ ಬಾಲಕಿ ಪೋಷಕರ ಜೊತೆ ವಾಸವಿದ್ದಳು. ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದಿದ್ದ ಆರೋಪಿ, ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದ. ನಂತರ ಆಗಾಗ ಆಕೆಯನ್ನು ಭೇಟಿ ಮಾಡುತ್ತಿದ್ದ.’

ADVERTISEMENT

‘ಕೈಯಲ್ಲಿ ತಾಳಿ ಹಿಡಿದುಕೊಂಡು ಸೋಮವಾರ ಬೆಳಿಗ್ಗೆ ಬಾಲಕಿಯ ಮನೆಗೆ ಹೋಗಿದ್ದ ಆರೋಪಿ, ‘ಮದುವೆಯಾಗೋಣ ಬಾ’ ಎಂದಿದ್ದ. ಅದಕ್ಕೆ ಆಕೆ ಒಪ್ಪಿರಲಿಲ್ಲ. ಸಿಟ್ಟಾದ ಆರೋಪಿ, ಆಕೆಯನ್ನು ಅಪಹರಿಸಿ ಗಿರಿನಗರದಲ್ಲಿರುವ ತನ್ನ ಸ್ನೇಹಿತನ ಮನೆಗೆ ಕರೆತಂದು ಅಕ್ರಮ ಬಂಧನದಲ್ಲಿಟ್ಟುಕೊಂಡಿದ್ದ’ ಎಂದೂ ಪೊಲೀಸರು ತಿಳಿಸಿದರು.

‘ಸ್ನೇಹಿತನ ಮನೆಯಲ್ಲಿ ಬಾಲಕಿಗೆ ತಾಳಿ ಕಟ್ಟಲು ಆರೋಪಿ ಮುಂದಾಗಿದ್ದ. ಅದನ್ನು ವಿರೋಧಿಸಿದ್ದ ಆಕೆ, ತಪ್ಪಿಸಿಕೊಳ್ಳಲು ಯತ್ನಿಸಿದ್ದಳು. ಅದೇ ವೇಳೆ ಆರೋಪಿ, ಆಕೆಯ ಹೊಟ್ಟೆಗೆ ಐದಾರು ಬಾರಿ ಚಾಕುವಿನಿಂದ ಇರಿದಿದ್ದ. ಸ್ಥಳದಲ್ಲಿ ಕುಸಿದು ಬಿದ್ದ ಬಾಲಕಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾಳೆ.’

‘ಗಲಾಟೆ ಶಬ್ಧ ಕೇಳಿದ್ದ ಮನೆ ಮಾಲೀಕರು ಸ್ಥಳಕ್ಕೆ ಹೋಗಿದ್ದರು. ಬಾಲಕಿ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಠಾಣೆಗೆ ಮಾಹಿತಿ ನೀಡಿದ್ದರು’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.