ADVERTISEMENT

ಯಕ್ಷಗಾನ ಅಕಾಡೆಮಿಗೆ ಜಿ.ಎಲ್ ಹೆಗಡೆ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 17:15 IST
Last Updated 12 ಜನವರಿ 2022, 17:15 IST
ಡಾ.ಜಿ.ಎಲ್. ಹೆಗಡೆ ಮಣಕಿ
ಡಾ.ಜಿ.ಎಲ್. ಹೆಗಡೆ ಮಣಕಿ   

ಬೆಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿಗೆ ಡಾ.ಜಿ.ಎಲ್. ಹೆಗಡೆ ಮಣಕಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

ಪ್ರೊ.ಎಂ.ಎ. ಹೆಗಡೆ ಅವರ ನಿಧನದಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನ,ಒಂಬತ್ತು ತಿಂಗಳಿಂದ ಖಾಲಿಯಿತ್ತು.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಮಣಕಿಯ ಜಿ.ಎಲ್. ಹೆಗಡೆ ಅವರು, ಯಕ್ಷಗಾನದ ವಿವಿಧ ವಿಭಾಗಗಳಲ್ಲಿ ಕೊಡುಗೆ ನೀಡಿದ್ದಾರೆ. ಅವರು ಕುಮಟಾದ ಬಾಳಿಗಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದಾರೆ. ಕುಮಟಾ ಯಕ್ಷಗಾನ ಸಂಶೋಧನಾ ಕೇಂದ್ರದ ಸಂಸ್ಥಾಪಕ ನಿರ್ದೇಶಕರಾಗಿರುವ ಅವರು, ‘ಅಂಧಕಾಸುರ ವಧೆ’ ಮತ್ತು ‘ಭಾಗವತ ಪಾರಮ್ಯ’ ಎಂಬ ಯಕ್ಷಗಾನ ಪ್ರಸಂಗ ರಚಿಸಿದ್ದಾರೆ.

ADVERTISEMENT

ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸಿ, ನಿರ್ದೇಶಿಸಿದ್ದಾರೆ. ಕಲಾವಿದರೂ ಆಗಿರುವ ಅವರು, 50 ವರ್ಷಗಳಿಂದ ಬಯಲಾಟ ಮೇಳಗಳಲ್ಲಿ ಪಾತ್ರಧಾರಿಯಾಗಿ ಅಭಿನಯಿಸುತ್ತಿದ್ದಾರೆ. ಕೌರವ, ಭೀಮ, ಜರಾಸಂಧ ಸೇರಿದಂತೆ ವಿವಿಧ ಪೌರಾಣಿಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ತಾಳಮದ್ದಳೆ ಅರ್ಥದಾರಿಯೂ ಆಗಿದ್ದಾರೆ. ಯಕ್ಷಗಾನ ಕಲೆಗೆ ಸಂಬಂಧಿಸಿದಂತೆ ಸಂಶೋಧನೆ, ಮಾರ್ಗದರ್ಶನವನ್ನೂ ನೀಡಿದ್ದಾರೆ. ‘ಶೇಣಿ ರಾಮಾಯಣ’ ಸೇರಿದಂತೆ ವಿವಿಧ ಕೃತಿಗಳನ್ನು ರಚಿಸಿರುವ ಅವರು, ಕಿರುತೆರೆ ಮತ್ತು ಚಲನಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.