ADVERTISEMENT

ಜಾಗತಿಕ ಹೂಡಿಕೆದಾರರ ಸಮಾವೇಶದ ಸಮಾರೋಪ: ಜಾಗತಿಕ ಮಟ್ಟದಲ್ಲಿ ಕರ್ನಾಟಕ ಸ್ಪರ್ಧೆ

ಜಾಗತಿಕ ಹೂಡಿಕೆದಾರರ ಸಮಾವೇಶದ ಸಮಾರೋಪದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2025, 16:14 IST
Last Updated 14 ಫೆಬ್ರುವರಿ 2025, 16:14 IST
<div class="paragraphs"><p> ಸಮಾರಂಭದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ, ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಗ್ರೀಸ್‌ನ ಮಾಜಿ ಪ್ರಧಾನಿ ಜಾರ್ಜ್‌ ಪಪಾಂಡ್ರ್ಯೂ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಂಸದ ಶಶಿ ತರೂರ್, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮತ್ತು ಸಚಿವ ಕೆ.ಜೆ.ಜಾರ್ಜ್ ಸಂಭ್ರಮಿಸಿದ ಕ್ಷಣ </p></div>

ಸಮಾರಂಭದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ, ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಗ್ರೀಸ್‌ನ ಮಾಜಿ ಪ್ರಧಾನಿ ಜಾರ್ಜ್‌ ಪಪಾಂಡ್ರ್ಯೂ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಂಸದ ಶಶಿ ತರೂರ್, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮತ್ತು ಸಚಿವ ಕೆ.ಜೆ.ಜಾರ್ಜ್ ಸಂಭ್ರಮಿಸಿದ ಕ್ಷಣ

   

ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್

ಬೆಂಗಳೂರು: ‘ಬಂಡವಾಳ ಹೂಡಿಕೆ ಆಕರ್ಷಣೆ ವಿಚಾರದಲ್ಲಿ ಕರ್ನಾಟಕವು ದೇಶದ ಇತರ ರಾಜ್ಯಗಳ ಜತೆ ಸ್ಪರ್ಧೆ ಮಾಡುತ್ತಿಲ್ಲ. ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡುತ್ತಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಬಣ್ಣಿಸಿದರು.

ADVERTISEMENT

‘ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ’ದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಹೂಡಿಕೆ ಮಾಡಲು ಒಪ್ಪಂದ ಮಾಡಿಕೊಂಡವರು ರಾಜ್ಯದಲ್ಲಿ ಸೋಲುವ ಮಾತಿಲ್ಲ. ನಮ್ಮ ರಾಜ್ಯಕ್ಕೆ ಬಂದವರು ಬರಿಗೈಯಲ್ಲಿ ಹೋಗುವುದಿಲ್ಲ. ಭಾರತವನ್ನು ವಿಶ್ವವು ಬೆಂಗಳೂರು ಮತ್ತು ಕರ್ನಾಟಕದ ಮೂಲಕ ನೋಡುತ್ತಿದೆ. ಅದಕ್ಕಾಗಿಯೇ ರಾಜ್ಯದ ವಿವಿಧ ನಗರಗಳಲ್ಲಿ ಪ್ರಗತಿ ಸಾಧಿಸಲು ಯೋಜನೆ ರೂಪಿಸಲಾಗಿದೆ’ ಎಂದು ಹೇಳಿದರು.

ಸಂಸದ ಶಶಿ ತರೂರ್‌ ಮಾತನಾಡಿ, ‘21ನೇ ಶತಮಾನದಲ್ಲಿ ದೇಶ ಮುನ್ನಡೆಯಬೇಕಿರುವ ದಾರಿ ಯಾವುದು ಎಂಬುದನ್ನು ಕರ್ನಾಟಕವು ತೋರಿಸಿದೆ. ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡುತ್ತಿರುವ ಕರ್ನಾಟಕದಿಂದ ಕೇರಳ, ತಮಿಳುನಾಡು ಸಹಿತ ವಿವಿಧ ರಾಜ್ಯಗಳು ಕಲಿಯುವುದು ಬಹಳಷ್ಟಿವೆ’ ಎಂದರು.

ಗ್ರೀಸ್ ಮಾಜಿ ಪ್ರಧಾನಿ ಜಾರ್ಜ್‌ ಪಪಾಂಡ್ರ್ಯೂ  ಮಾತನಾಡಿ, ‘ಯೂರೋಪ್‌ ದೇಶಗಳು ದೊಡ್ಡ ಮಟ್ಟದ ಬಿಕ್ಕಟ್ಟು ಎದುರಿಸುತ್ತಿವೆ. ಅಲ್ಲಿ ಬೆಳವಣಿಗೆ ದೊಡ್ಡ ಸವಾಲಾಗಿದೆ. ಭಾರತ ಅದರಲ್ಲೂ ನಿರ್ದಿಷ್ಟವಾಗಿ ಕರ್ನಾಟಕ ಈ ಸವಾಲನ್ನು ಮೆಟ್ಟಿ ನಿಂತಿದೆ. ಕರ್ನಾಟಕದ ಕೈಗಾರಿಕಾ ಮತ್ತು ಇತರ ನೀತಿಗಳು ಹೂಡಿಕೆಗೆ ಮೇಲ್ಪಂಕ್ತಿಯಾಗಿವೆ’ ಎಂದು ಶ್ಲಾಘಿಸಿದರು.

ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ರಾಜ್ಯದ ಸಚಿವರಾದ ಎಚ್.ಕೆ. ಪಾಟೀಲ, ಕೆ.ಜೆ. ಜಾರ್ಜ್‌, ಪ್ರಿಯಾಂಕ್‌ ಖರ್ಗೆ,  ಮಂಕಾಳ ವೈದ್ಯ, ಆರ್.ಬಿ. ತಿಮ್ಮಾಪುರ, ಈಶ್ವರ ಖಂಡ್ರೆ, ಡಾ.ಎಂ.ಸಿ. ಸುಧಾಕರ್, ಶಿವರಾಜ ತಂಗಡಗಿ, ರಹೀಂ ಖಾನ್,  ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರು, ಅಧಿಕಾರಿಗಳು ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದಲ್ಲಿ ಹೂಡಿಕೆದಾರರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್

ಪರಿಸರಸ್ನೇಹಿ ಸಾರಿಗೆ ನೀತಿ ಬಿಡುಗಡೆ

ಮುಂದಿನ ಐದು ವರ್ಷಗಳ ‘ಪರಿಸರಸ್ನೇಹಿ ಸಾರಿಗೆ ನೀತಿ’ಯನ್ನು ಇಂಧನ ಸಚಿವ ಕೆ.ಜೆ. ಜಾರ್ಜ್ ಬಿಡುಗಡೆ ಮಾಡಿದರು. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌ ಬಿ ಪಾಟೀಲ ಈ ಬಗ್ಗೆ ಮಾತನಾಡಿ ‘ವಿದ್ಯುತ್ ಮತ್ತು ಹೈಡ್ರೋಜನ್ ಚಾಲಿತ ವಾಹನ ತಯಾರಿಕೆ ವಲಯಕ್ಕೆ ಮುಂದಿನ 5 ವರ್ಷಗಳಲ್ಲಿ ₹50 ಸಾವಿರ ಕೋಟಿ ಬಂಡವಾಳ ಆಕರ್ಷಿಸಿ 1 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಈ ನೀತಿ ಹೊಂದಿದೆ. ಇದಕ್ಕಾಗಿ ಗೌರಿಬಿದನೂರು ಧಾರವಾಡ ಮತ್ತು ಹಾರೋಹಳ್ಳಿಯಲ್ಲಿ ಪರಿಸರಸ್ನೇಹಿ ಇಂಧನ ಕ್ಲಸ್ಟರ್‌ಗಳನ್ನು ಸ್ಥಾಪಿಸಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.