ಹಾಸನ: ‘ಆಲೂಗೆಡ್ಡೆ ಬಿತ್ತನೆ ಬೀಜ ವಿತರಣೆ ವ್ಯವಸ್ಥೆಯಲ್ಲಿ ಲೋಪ ಉಂಟಾಗಿ, ಗೋಲಿಬಾರ್ ಆದ್ರೆ ಅದಕ್ಕೆ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ಅವರೇ ಹೊಣೆ’ ಎಂದು ಸಚಿವ ಎಚ್.ಡಿ.ರೇವಣ್ಣ ಬುಧವಾರ ಇಲ್ಲಿ ಕಿಡಿಕಾರಿದರು.
‘ಚುನಾವಣೆ ಮುಗಿದು ಹಲವು ದಿನ ಕಳೆದರೂ ರೈತರ ಬಗ್ಗೆ ಚರ್ಚಿಸಲು ಡಿ.ಸಿಗೆ ಸಮಯ ಇಲ್ಲ. ಬರ ಪರಿಹಾರ ಕಾಮಗಾರಿಗಾಗಿ ಸರ್ಕಾರ ಜಿಲ್ಲೆಗೆ ₹8 ಕೋಟಿ ಬಿಡುಗಡೆ ಮಾಡಿದೆ. ಕುಡಿಯುವ ನೀರಿಗಾಗಿ ₹ 5 ಕೋಟಿ ನೀಡಿದೆ. ಆದರೆ ಒಂದು ಬಿಡಿಗಾಸೂ ಬಿಡುಗಡೆ ಮಾಡಿಲ್ಲ. ಹಿಂದಿನ ಡಿ.ಸಿ ನಡೆಸಿರುವ ಸಭೆಯನ್ನು ನೋಡಿ ಕೆಲಸ ಮಾಡಲಿ. ಕೆಲಸ ಮಾಡಲು ಆಗದಿದ್ದರೆ ರಜೆ ಹಾಕಿ ಹೋಗಲಿ’ ಎಂದು ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.
‘ದೇವೇಗೌಡರ ಕುಟುಂಬದವರು ಟೆಂಪಲ್ ರನ್ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಾರೆ. ದೇವಸ್ಥಾನಕ್ಕೆ ಭೇಟಿ ನೀಡಬಾರದು ಎಂಬ ನಿಯಮ ಇದೆಯೇ?’ ಎಂದು ಜಗದೀಶ ಶೆಟ್ಟರ್ ಆರೋಪಕ್ಕೆ ತಿರುಗೇಟು ನೀಡಿದರು.
ಡಿ.ಸಿ ಪ್ರಿಯಾಂಕಾ ಮಾತನಾಡಿ, ‘ರೈತರ ಯಾವುದೇ ಕೆಲಸ ಬಾಕಿ ಉಳಿದಿದ್ದರೂ ಮಾಡಿಕೊಡಲಾಗುವುದು. ಬರ ಪರಿಹಾರ ಕುರಿತು ವಾರಕ್ಕೊಮ್ಮೆ ಟಾಸ್ಕ್ಫೋರ್ಸ್ ಸಭೆ ನಡೆಸಲಾಗುತ್ತಿದೆ. ಆಲೂಗೆಡ್ಡೆ ದರನಿರ್ಧಾರ ಕುರಿತು ರೈತರ ಸಭೆ ನಡೆಸಲಾಗಿದೆ. ಬರ ವಿಚಾರಕ್ಕೂ ನೀತಿ ಸಂಹಿತೆಗೂ ಸಂಬಂಧವಿಲ್ಲ. ಯಾವ ವಿಚಾರಕ್ಕೆ ಗೋಲಿಬಾರ್ ವಿಷಯ ಪ್ರಸ್ತಾಪಿಸಿದ್ದಾರೆ ಎಂಬುದು ಗೊತ್ತಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.