ಹುಬ್ಬಳ್ಳಿ: ಕೊರೊನಾ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ರಾಜ್ಯ ಸರ್ಕಾರ ಭಾನುವಾರ ಸಂಪೂರ್ಣ ಲಾಕ್ಡೌನ್ ಘೋಷಿಸಿದೆ. ವಾಣಿಜ್ಯ ನಗರಿಯಲ್ಲಿಯೂ ಈ ಲಾಕ್ಡೌನ್ ಪರಿಣಾಮಕಾರಿಯಾಗಿದೆ.
ಶನಿವಾರ ರಾತ್ರಿಯಿಂದಲೇ ವಾಹನಗಳ ಓಡಾಟ ಕಡಿಮೆಯಾಗಿತ್ತು. ನಗರದಲ್ಲಿ ಸೋಂಕಿತರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ ಜನರೇ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಹಾಲು ಮತ್ತು ಔಷಧ ಅಂಗಡಿಗಳ ಮುಂದೆ ಕೆಲ ಜನ ಕಂಡಿದ್ದು ಬಿಟ್ಟರೆ, ಬೇರೆ ಎಲ್ಲಿಯೂ ಹೆಚ್ಚು ಜನರು ಕಂಡುಬರಲಿಲ್ಲ. ರಸ್ತೆಗಳು ಬಿಕೋ ಎನ್ನುತ್ತಿವೆ.
ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಕೇಶ್ವಾಪುರ ಸರ್ಕಲ್, ಸಂಗೊಳ್ಳಿ ರಾಯಣ್ಣ ವೃತ್ತ, ರೈಲು ನಿಲ್ದಾಣ, ಶಿರೂರು ಪಾರ್ಕ್ ಸರ್ಕಲ್ ಮತ್ತು ಕಿಮ್ಸ್ ಮುಂಭಾಗದ ರಸ್ತೆ ಸೇರಿದಂತೆ ಹಲವು ಮುಖ್ಯ ರಸ್ತೆಗಳಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಪೊಲೀಸರು ಅಲ್ಲಲ್ಲಿ ಓಡಾಡುತ್ತಿದ್ದ ದ್ವಿಚಕ್ರ ವಾಹನ ಸವಾರರನ್ನು ತಡೆದು, ವಿಚಾರಿಸಿ ಅಗತ್ಯ ಕೆಲಸವಿದ್ದವರಿಗಷ್ಟೇ ಬಿಡುತ್ತಿದ್ದ ಚಿತ್ರಣ ಕಂಡು ಬಂತು.
ಶನಿವಾರ ತಡರಾತ್ರಿಯೂ ವ್ಯಾಪಾರದಲ್ಲಿ ತೊಡಗಿದ್ದ ಬಿವಿಬಿ ಕಾಲೇಜು ಎದುರಿನ ಹೋಟೆಲ್ ಮುಂದೆ ಸೇರಿದ್ದ ಜನರನ್ನು ಪೊಲೀಸರು ಬಲವಂತವಾಗಿ ಮನೆಗೆ ಕಳುಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.