ಬೆಂಗಳೂರು: ‘ಕೊರೊನಾದಿಂದ ಕೋಲಾರದಲ್ಲಿ ಇದೇ 19ರಂದು ನಾಲ್ವರ ಮತ್ತು 20ರಂದು ಒಬ್ಬರ ಸಾವು ಸಂಭವಿಸಿದೆ ಎಂದು ಜಾಲಪ್ಪ ಆಸ್ಪತ್ರೆ ವರದಿ ಮಾಡಿದ್ದರೂ ಆರೋಗ್ಯ ಇಲಾಖೆ ಆ ದಿನಗಳಲ್ಲಿ ಅಲ್ಲಿ ಕೊರೊನಾದಿಂದ ಸಾವು ಸಂಭವಿಸಿಲ್ಲ ಎಂದಿದೆ. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಕೊರೊನಾ ನಿಯಂತ್ರಣದ ಪರಿಯಿದು’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಅವರು, ‘ಕೊರೊನಾ ನಿಯಂತ್ರಣದಲ್ಲಿ ತನ್ನ ವೈಫಲ್ಯ ಮುಚ್ಚಿಡಲು ಸಾವು ಮತ್ತು ಸೋಂಕಿನ ಮಾಹಿತಿಯನ್ನು ಮುಖ್ಯಮಂತ್ರಿ ಬಚ್ಚಿಡುತ್ತಿದ್ದಾರೆ ಎನ್ನುವುದಕ್ಕೆ ಈ ಸುಳ್ಳುಗಳೇ ಪುರಾವೆ’ ಎಂದಿದ್ದಾರೆ.
‘ಕೊರೊನಾ ಮಾಹಿತಿ ಕೇಳಿ ನಿರಂತರ ಪತ್ರ ಬರೆದರೂ ಮುಖ್ಯಮಂತ್ರಿ ಮತ್ತು ಸಚಿವರು ಯಾಕೆ ಉತ್ತರಿಸುತ್ತಿಲ್ಲ ಎನ್ನುವುದನ್ನು ಕೋಲಾರದ ಸಾವಿನ ವರದಿಯಲ್ಲಿನ ಸುಳ್ಳುಗಳಿಂದ ಅರ್ಥ ಮಾಡಿಕೊಳ್ಳಬಹುದು. ಸೋಂಕು- ಸಾವಿನ ಸಂಖ್ಯೆಯನ್ನು ಬಚ್ಚಿಟ್ಟರೂ ನೊಂದ ಕುಟುಂಬಗಳ ಶಾಪದಿಂದ ನೀವು ಪಾರಾಗಲಾರಿರಿ. ಭ್ರಷ್ಟಾಚಾರದಿಂದಾಗಿ ಹದಗೆಟ್ಟಿರುವ ಹಣಕಾಸು ಸ್ಥಿತಿ ನಿಯಂತ್ರಿಸಲಾಗದೆ ಅನಿರ್ಬಂಧಿತವಾಗಿ ಎಲ್ಲ ವ್ಯಾಪಾರ-ವಹಿವಾಟನ್ನು ತೆರೆದು ಕೂತಿದ್ದೀರಿ. ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಜನರ ಶಾಪದಿಂದ ಯಾವ ಹೈಕಮಾಂಡ್ ಕೂಡಾ ನಿಮ್ಮನ್ನು ರಕ್ಷಿಸದು’ ಎಂದೂ ಮುಖ್ಯಮಂತ್ರಿಯನ್ನು ಉದ್ದೇಶಿಸಿ ಹೇಳಿದ್ದಾರೆ.
‘ಮರೆಮಾಚುವ ಅಗತ್ಯ ಇಲ್ಲ’:ಸಿದ್ದರಾಮಯ್ಯ ಟ್ವೀಟ್ಗೆ ಪ್ರತಿ ಟ್ವೀಟ್ ಮಾಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ‘ಕೊರೊನಾ ಸಂಬಂಧಿಸಿದ ಮಾಹಿತಿಯನ್ನು ಪಾರದರ್ಶಕವಾಗಿ ಪ್ರಕಟಿಸುವಲ್ಲಿ ಇಡೀ ದೇಶದಲ್ಲಿಯೇ ನಮ್ಮ ಸರ್ಕಾರ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದೆ. ಯಾವುದೇ ವಿಷಯವನ್ನು ಮರೆಮಾಚುವ ಉದ್ದೇಶ ಇಲ್ಲ. ಅದರ ಅವಶ್ಯ ಇಲ್ಲ’ ಎಂದಿದ್ದಾರೆ. ‘ಸೆ. 19ರಂದು ಕೋಲಾರದ ಆರ್.ಎಲ್.ಜೆ ಆಸ್ಪತ್ರೆಯಲ್ಲಿ ಮೂರು ಸಾವು ಸಂಭವಿಸಿತ್ತು. ಸಾವಿನ ಕಾರಣದ ಬಗ್ಗೆ ಆಸ್ಪತ್ರೆ ಮಾಹಿತಿ ನೀಡಲು ವಿಳಂಬವಾದ ಕಾರಣ ಅದನ್ನು 24ರಂದು ವರದಿ ಮಾಡಲಾಗಿತ್ತು. 20ರಂದು ಸಂಭವಿಸಿದ ಒಂದು ಸಾವನ್ನು ಇದೇ ಕಾರಣಕ್ಕೆ 25ರಂದು ವರದಿ ಮಾಡಲಾಗಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.