ADVERTISEMENT

ಮದರಸಾ ಶಿಕ್ಷಣಕ್ಕೆ ಮಂಡಳಿ: ಉತ್ತರ ಪ್ರದೇಶ ಮಾದರಿ ಜಾರಿಯತ್ತ ಸರ್ಕಾರದ ಚಿತ್ತ

ಉತ್ತರ ಪ್ರದೇಶ ಮಾದರಿ ಜಾರಿಯತ್ತ ರಾಜ್ಯ ಸರ್ಕಾರದ ಚಿತ್ತ

ಚಂದ್ರಹಾಸ ಹಿರೇಮಳಲಿ
Published 23 ಆಗಸ್ಟ್ 2022, 19:30 IST
Last Updated 23 ಆಗಸ್ಟ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮುಸ್ಲಿಂ ಧಾರ್ಮಿಕ ಶಿಕ್ಷಣ ಕೇಂದ್ರಗಳ ನಿಯಂತ್ರಣಕ್ಕೆ ಉತ್ತರ ಪ್ರದೇಶದ ಮಾದರಿಯಲ್ಲಿ ‘ಕರ್ನಾಟಕ ಮದರಸಾ ಶಿಕ್ಷಣ ಮಂಡಳಿ’ ರಚಿಸಲು ಸರ್ಕಾರ ಮುಂದಾಗಿದೆ.

ಉತ್ತರ ಪ್ರದೇಶ, ಉತ್ತರಾಖಂಡ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರಮದರಸಾ ಶಿಕ್ಷಣ ಮಂಡಳಿ ರಚಿಸಿವೆ. ಅಲ್ಲಿನ ಮಂಡಳಿಗಳು ಈಗಾಗಲೇ ಮದರಸಾಗಳಲ್ಲಿನ ಶಿಕ್ಷಣ ಕೇಂದ್ರಗಳನ್ನು ನಿಯಂತ್ರಿಸುತ್ತಿವೆ. ಶೈಕ್ಷಣಿಕ ಚಟುವಟಿಕೆಗಳಲ್ಲಿ ಹಸ್ತಕ್ಷೇಪ, ಪಠ್ಯಕ್ರಮ ಪರಿಷ್ಕರಣೆ ಕಾರ್ಯಗಳೂ ನಡೆದಿವೆ ಎಂಬ ಆರೋಪವೂ ಇದೆ. ಅಂತಹ ಮಂಡಳಿಗಳ ಸ್ವರೂಪ, ರಚನೆ, ಅನುಷ್ಠಾನ, ಕಾರ್ಯವಿಧಾನಗಳನ್ನೇ ರಾಜ್ಯದಲ್ಲೂ ಅನುಸರಿಸಲು ಸಿದ್ಧತೆಗಳು ನಡೆದಿದೆ.

ಧಾರ್ಮಿಕ ಶಿಕ್ಷಣದ ಜತೆಗೆ, ಸ್ಥಳೀಯ ಶಾಲೆಗಳಲ್ಲಿ ಔಪಚಾರಿಕ ಶಿಕ್ಷಣ ಕಡ್ಡಾಯಗೊಳಿಸುವುದು. ಮಂಡಳಿಯ ಅನುಮತಿ
ಪಡೆದು ಪ್ರತಿ ಮದರಸಾಕ್ಕೂ ಇಬ್ಬರು ಹಿಪ್ಸ್‌ (ಕುರ್‌ಆನ್‌ ಕಂಠಪಠಣ),ನಾಜಿಯಾ (ಧಾರ್ಮಿಕ ವಿಧಿ
ವಿಧಾನ ಹೇಳಿಕೊಡುವ) ಬೋಧಕರನ್ನು ಅತಿಥಿಶಿಕ್ಷಕರ ಮಾದರಿಯಲ್ಲಿ ನೇಮಿಸುವುದು. ಮಕ್ಕಳಲ್ಲಿ ರಾಷ್ಟ್ರಪ್ರೇಮ ಜಾಗೃತಗೊಳಿಸಲು ಇತರೆ ಶಾಲೆಗಳಂತೆ ಬೆಳಗಿನ ಪ್ರಾರ್ಥನೆಯ ವೇಳೆ ರಾಷ್ಟ್ರಗೀತೆಗಳನ್ನು ಕಡ್ಡಾಯವಾಗಿ ಹಾಡಿಸುವುದು, ಮೂಲಸೌಕರ್ಯಗಳ ಅಭಿವೃದ್ಧಿಗೆ ನೆರವು ನೀಡಿ, ಅನುಷ್ಠಾನಗೊಳಿಸಲು ಈ ನೀತಿ ರೂಪಿಸಲಾಗುತ್ತಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ADVERTISEMENT

ಕರ್ನಾಟಕ ವಕ್ಫ್‌ ಮಂಡಳಿಯಲ್ಲಿ ನೋಂದಾಯಿಸಿಕೊಂಡಿರುವ 966 ಮದರಸಾಗಳು ರಾಜ್ಯದಲ್ಲಿವೆ. ಮುಸ್ಲಿಂ ಸಮುದಾಯದ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಧಾರ್ಮಿಕ ಶಿಕ್ಷಣ ನೀಡುವ ಇಂತಹ ಬಹುತೇಕ ಮದರಸಾಗಳು ಅಸಂಘಟಿತವಾಗಿದ್ದು, ಮೂಲ ಸೌಕರ್ಯಗಳಿಲ್ಲ. ಮದರಸಾಗಳಲ್ಲಿ ಮೂಲಸೌಕರ್ಯ ಕಲ್ಪಿಸಲು2016ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಬಜೆಟ್‌ನಲ್ಲಿ ₹ 50 ಕೋಟಿ ಮೀಸಲಿಟ್ಟಿ
ದ್ದರು. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ನಂತರ ಈ ಅನುದಾನ ಬಳಸಲು ಒಪ್ಪಿಗೆ ಸೂಚಿಸಿ
ದ್ದಾರೆ. ಕುಡಿಯುವ ನೀರು, ಶೌಚಾಲಯ, ವಸತಿ ಸೌಕರ್ಯಕ್ಕೆ ಈ ಅನುದಾನ ಉಪಯೋಗಿಸಲು ಸೂಚಿಸಿದ್ದಾರೆ. ವಕ್ಫ್‌ ಮಂಡಳಿಯಲ್ಲಿ ನೋಂದಾಯಿಸಿದ ಪ್ರತಿ ಮದರಸಾಗಳಿಗೂ ತಲಾ ₹ 10 ಲಕ್ಷ ನಿಗದಿ ಮಾಡಲಾಗಿದೆ.

‘ಮದರಸಾಗಳಲ್ಲಿ ಧಾರ್ಮಿಕ ಶಿಕ್ಷಣ ಕುರಿತು ಅಪನಂಬಿಕೆಗಳಿದ್ದವು. ನಮ್ಮೆಲ್ಲರ ಪ್ರಯತ್ನದ ಫಲವಾಗಿ ಮದರಸಾ ವಿದ್ಯಾರ್ಥಿಗಳು ಬೇರೆಯುವರಂತೆ ಇಂದು ಸಾಮಾನ್ಯ ಶಿಕ್ಷಣವನ್ನೂ ಕಲಿಯುತ್ತಿದ್ದಾರೆ. ಸಾಮರಸ್ಯಕ್ಕೆ ಒತ್ತು ನೀಡಲಾಗುತ್ತಿದೆ. ಮಂಡಳಿ ರಚನೆ ಸ್ವಾಗತಾರ್ಹವಾದರೂ, ಗುಪ್ತ ಕಾರ್ಯಸೂಚಿಗಳಿದ್ದರೆ ಯಾವುದೂ ಸಫಲವಾಗದು’ ಎನ್ನುತ್ತಾರೆ ಮುಸ್ಲಿಂ ಸಮುದಾಯದ ಮುಖಂಡ, ವಕೀಲ ಅನೀಸ್‌ ಪಾಶಾ.

ಅವರ ಮಾತಿಗೆ ಧ್ವನಿಗೂಡಿಸುವ ಮತ್ತೊಬ್ಬ ಮುಖಂಡ ನಜೀರ್ ಅಹಮದ್‌, ‘ಮುಸ್ಲಿಮರ ವಿರುದ್ಧ ಉತ್ತರ ಪ್ರದೇಶದ ಮಾದರಿಯನ್ನು ರಾಜ್ಯದಲ್ಲೂ ಅನುಸರಿಸುವ ಪ್ರಯತ್ನ ಗಳು ನಡೆಯುತ್ತಿವೆ. ಅಲ್ಲಿನ ಮಂಡಳಿ ಮದರಸಾಗಳ ಆವರಣದಲ್ಲಿ ನರೇಂದ್ರ ಮೋದಿ ಅವರ ಭಾವಚಿತ್ರ ಕಡ್ಡಾಯಗೊಳಿಸಿ, ಈಚೆಗೆ ಆದೇಶ ಹೊರಡಿಸಿದೆ. ಇಂತಹ ಪ್ರಯತ್ನಗಳ ಮೂಲಕ ರಾಜಕೀಯ ಲಾಭ ಪಡೆಯಲು ನಮ್ಮ ಸಮುದಾಯ ಅವಕಾಶ ನೀಡುವು ದಿಲ್ಲ’ ಎಂದರು.

ಮಂಡಳಿ ರಚನೆ: ಇಂದು ಸಭೆ

ಮದರಸಾ ಶಿಕ್ಷಣ ಮಂಡಳಿ ರಚನೆ ಕುರಿತು ಚರ್ಚಿಸಲುಆ.24ರಂದು ಸಂಜೆ 4.30ಕ್ಕೆ ವಿಧಾನಸೌಧದಲ್ಲಿ ಸಭೆ ಕರೆಯಲಾಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್‌ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಭೆಯಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಆಯುಕ್ತರು, ನಿರ್ದೇಶಕರು ಭಾಗವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.