ADVERTISEMENT

ಜಿಪಿಎಸ್‌ ಅಧಾರಿತ ಅಂಕಿ–ಅಂಶಗಳ ವರದಿ

ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯಿಂದ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 18:24 IST
Last Updated 20 ಜನವರಿ 2021, 18:24 IST

ಬೆಂಗಳೂರು: ರಾಜ್ಯದ ವಿವಿಧ ಪ್ರದೇಶಗಳ ಪ್ರಗತಿ, ಇಲಾಖಾವಾರು ವೆಚ್ಚ, ಕಾರ್ಯಕ್ರಮ ಅನುಷ್ಠಾನ ಮತ್ತಿತರ ವಿಷಯಗಳನ್ನು ಒಳಗೊಂಡಿರುವ 2019–20ನೇ ಸಾಲಿನ ‘ಕರ್ನಾಟಕ ಅಂಕಿ–ಅಂಶಗಳ ನೋಟ’ವನ್ನು ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಬಿಡುಗಡೆ ಮಾಡಿದೆ. ವರದಿಯ ಜತೆಗೆ ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಪಿಎಸ್‌) ಆಧರಿತ ನಕ್ಷೆಗಳನ್ನೂ ಸಿದ್ಧಪಡಿಸಿದೆ.

ಬುಧವಾರ ವಿಧಾನಸೌಧದಲ್ಲಿ ನಡೆದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ವರದಿ ಬಿಡುಗಡೆ ಮಾಡಿದರು. ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ ರೂಪಿಸಿರುವ ತಂತ್ರಾಂಶದ ಮೂಲಕ ವರದಿಯನ್ನು ಜಿಪಿಎಸ್‌ ವ್ಯವಸ್ಥೆಗೆ ಜೋಡಣೆ ಮಾಡಲಾಗಿದೆ.

ಭೂ ವಿಸ್ತೀರ್ಣ, ಜನಸಂಖ್ಯೆ, ಮಳೆ ಪ್ರಮಾಣ, ಕೃಷಿ, ತೋಟಗಾರಿಕೆ, ಕೈಗಾರಿಕೆ, ಬ್ಯಾಂಕಿಂಗ್‌, ಸಾರಿಗೆ, ಶಿಕ್ಷಣ, ಆರೋಗ್ಯ, ಶಿಕ್ಷಣ ಸೇರಿದಂತೆ 17 ಶೀರ್ಷಿಕೆಗಳ ಅಡಿಯಲ್ಲಿ ಎಲ್ಲ ಜಿಲ್ಲೆಗಳ ಮಾಹಿತಿಯನ್ನೂ ಒದಗಿಸಲಾಗಿದೆ. ಬೃಹತ್ ಕಾಮಗಾರಿಗಳು, ರಸ್ತೆಗಳ ಉದ್ದ ಸೇರಿದಂತೆ ಅಭಿವೃದ್ಧಿಗೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನೂ ವರದಿಯಲ್ಲಿ ನೀಡಲಾಗಿದೆ.

ADVERTISEMENT

ವರದಿ ಬಿಡುಗಡೆ ಬಳಿಕ ಮಾತನಾಡಿದ ಯಡಿಯೂರಪ್ಪ, ‘39 ಇಲಾಖೆಗಳ 1,800 ಯೋಜನೆಗಳ ಅನುಷ್ಠಾನಕ್ಕೆ ಬಿಡುಗಡೆ ಮಾಡಿರುವ ಅನುದಾನದ ವಿವರವನ್ನೂ ವರದಿಯಲ್ಲಿ ಒದಗಿಸಲಾಗಿದೆ. ಮುಂದೆ ತಂತ್ರಾಂಶದ ಮೂಲಕ ನಿರಂತರವಾಗಿ ಮಾಹಿತಿ ದಾಖಲಿಸಲಾಗುವುದು. ಇದರಿಂದ ಆಡಳಿತದಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ಸಾಧ್ಯವಾಗಲಿದೆ’ ಎಂದರು.

ಮುಂದಿನ ದಿನಗಳಲ್ಲಿ ವಿಧಾನಸಭಾ ಕ್ಷೇತ್ರವಾರು ಮಾಹಿತಿಯನ್ನೂ ತಂತ್ರಾಂಶಕ್ಕೆ ಅಳವಡಿಸಲಾಗುವುದು. ಅನುದಾನ ಬಿಡುಗಡೆ ಮತ್ತು ವೆಚ್ಚದ ವಿವರವನ್ನು ಆನ್‌ಲೈನ್‌ ಮೂಲಕವೇ ಸಾರ್ವಜನಿಕರು ಪಡೆಯುವ ವ್ಯವಸ್ಥೆ ರೂಪಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.