ADVERTISEMENT

ಭೋವಿ ಸಮುದಾಯಕ್ಕೆ ವಿನಾಯ್ತಿ ಭರವಸೆ

ಸಾಂಪ್ರದಾಯಿಕ ಕಲ್ಲು ಗಣಿಗಾರಿಕೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2021, 16:31 IST
Last Updated 16 ಮಾರ್ಚ್ 2021, 16:31 IST

ಬೆಂಗಳೂರು: ಸಾಂಪ್ರದಾಯಿಕವಾಗಿ ಬೆಂಕಿ ಉರಿಸಿ ಬಂಡೆಗಳನ್ನು ಒಡೆಯುವ ಕುಲ ಕಸುಬು ಮಾಡುತ್ತಿರುವ ಭೋವಿ ಸಮುದಾಯದ ಜನರಿಗೆ ಹೊಸ ಗಣಿ ನೀತಿಯಲ್ಲಿ ಕೆಲವು ವಿನಾಯ್ತಿಗಳನ್ನು ನೀಡಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಭರವಸೆ ನೀಡಿದರು.

ಮಂಗಳವಾರ ವಿಧಾನ ಪರಿಷತ್‌ನಲ್ಲಿ ಜೆಡಿಎಸ್‌ ಸದಸ್ಯ ಗೋವಿಂದ ರಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಪ್ರಸ್ತುತ ಜಾರಿಯಲ್ಲಿರುವ ಗಣಿ ನೀತಿಯ ಪ್ರಕಾರ ಪರವಾನಗಿ ಪಡೆಯದೆ ನಡೆಸುವ ಎಲ್ಲ ರೀತಿಯ ಕಲ್ಲು ಗಣಿಗಾರಿಕೆಯನ್ನೂ ಅಕ್ರಮ ಎಂದು ಪರಿಗಣಿಸಲಾಗುತ್ತಿದೆ. ಭೋವಿ ಸಮುದಾಯದ ಜನರು ಸಾಂಪ್ರದಾಯಿಕವಾಗಿ ನಡೆಸುವ ಕಲ್ಲು ಗಣಿಗಾರಿಕೆಗೆ ಸರಳವಾಗಿ ಅನುಮತಿ ನೀಡುವುದಕ್ಕೆ ಹೊಸ ಗಣಿ ನೀತಿಯಲ್ಲಿ ಅವಕಾಶ ಕಲ್ಪಿಸಲಾಗುವುದು’ ಎಂದರು.

ಗೋವಿಂದ ರಾಜು ಮಾತನಾಡಿ, ‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭೋವಿ ಸಮುದಾಯದ ನೂರಾರು ಕುಟುಂಬಗಳು ಬಂಡೆಯನ್ನು ಸುಟ್ಟು ಕಲ್ಲು ಗಣಿಗಾರಿಕೆ ನಡೆಸುವ ಕೆಲಸ ಮಾಡುತ್ತಿವೆ. ಅವರ ವಿರುದ್ಧ ಅಕ್ರಮ ಗಣಿಗಾರಿಕೆ ಆರೋಪದಡಿ ಪ್ರಕರಣ ದಾಖಲಿಸಲಾಗುತ್ತಿದೆ. ಕುಲ ಕಸುಬು ಮಾಡುವವರಿಗೆ ಸರ್ಕಾರ ರಕ್ಷಣೆ ನೀಡಬೇಕು’ ಎಂದು ಆಗ್ರಹಿಸಿದರು.

ADVERTISEMENT

₹ 2,336.13 ಕೋಟಿ ಲಭ್ಯ: ಜಿಲ್ಲಾ ಖನಿಜ ಅಭಿವೃದ್ಧಿ ನಿಧಿಯ ಮೂಲಕ ಸಂಗ್ರಹವಾಗಿರುವ ₹ 2,336.13 ಕೋಟಿ ಬಳಕೆಯಾಗದೆ ಉಳಿದಿದೆ. ಒಟ್ಟು ₹ 3,635.78 ಕೋಟಿ ಸಂಗ್ರಹವಾಗಿತ್ತು. ಈ ಪೈಕಿ ₹ 798.16 ಕೋಟಿ ಮಾತ್ರ ಬಳಕೆಯಾಗಿದೆ ಎಂದು ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.