ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ವಾದ ಮಂಡಿಸಲು ವಕೀಲ ಶ್ರೀಶೈಲ ವಡವಡಗಿ ಅವರನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಗೃಹ ಇಲಾಖೆ ನೇಮಕ ಮಾಡಿದೆ.
ಈ ಸಂಬಂಧ ಇಲಾಖೆ ಹೊರಡಿಸಿರುವ ಆದೇಶದ ಪ್ರತಿಯನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಟಿ.ಎಂ.ನರೇಂದ್ರ ಅವರು 70ನೇ ಸಿಸಿಎಚ್ ನ್ಯಾಯಾಲಯಕ್ಕೆ ಶನಿವಾರ ಸಲ್ಲಿಸಿದರು.
ವಡವಡಗಿ ಅವರು ನಿವೃತ್ತ ಪಬ್ಲಿಕ್ ಪ್ರಾಸಿಕ್ಯೂಟರ್. ಬಿಡದಿಯ ಧ್ಯಾನಪೀಠದ ಭಕ್ತೆಯ ಮೇಲಿನ ಅತ್ಯಾಚಾರ ಸೇರಿದಂತೆ ಸಿಐಡಿಯ ಹಲವು ಪ್ರಕರಣಗಳಲ್ಲಿ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
ಸಾಕ್ಷ್ಯ ನಾಶಕ್ಕೆ ಯತ್ನ: ಆರೋಪಿ ಕೆ.ಟಿ.ನವೀನ್ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಶನಿವಾರ ಕೈಗೆತ್ತಿಕೊಂಡಿತ್ತು.
ವಿಶೇಷ ಪ್ರಾಸಿಕ್ಯೂಟರ್ಟಿ.ಎಂ.ನರೇಂದ್ರ, ‘ನ್ಯಾಯಾಂಗ ಬಂಧನದಲ್ಲಿರುವ ನವೀನ್ಕುಮಾರ್, ಸಾಕ್ಷಿದಾರರೊಬ್ಬರಿಗೆ ಬೆದರಿಕೆ ಹಾಕಲು ಯತ್ನಿಸಿದ್ದಾರೆ. ಸಾಕ್ಷ್ಯ ನಾಶಕ್ಕೂ ಪ್ರಯತ್ನಿಸುತ್ತಿದ್ದಾರೆ. ಆತನಿಗೆ ಜಾಮೀನು ನೀಡಬಾರದು’ ಎಂದು ಕೋರಿದರು.
ಅದನ್ನು ಆಲಿಸಿದ ನ್ಯಾಯಾಧೀಶರು, ಪ್ರಕರಣದ ವಿಚಾರಣೆಯನ್ನು ಜುಲೈ 4ಕ್ಕೆ ಮುಂದೂಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.